ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಹೋಬಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ. ಶಿವಸ್ವಾಮಿ ಎಂಬ ವೈದ್ಯರು ಜನಸಾಮಾನ್ಯರ ಆರೋಗ್ಯವನ್ನು ಸರಿಯಾಗಿ ವಿಚಾರಿಸದೆ ತಾತ್ಸಾರ ತೋರುತ್ತಿದ್ದಾರೆ ಎಂದು ಹೊಣಕನಪುರ ಸಿದ್ದರಾಜು ಆರೋಪಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಗೆ ಬಡ ರೋಗಿಗಳು ಬಂದಾಗ ಹಣ ನೀಡದಿದ್ದರೆ ಸಮರ್ಪಕವಾಗಿ ಚಿಕಿತ್ಸೆ ನೀಡದೆ ದೂರ ತಳ್ಳುತ್ತಾರೆ. ಅಸ್ಪತ್ರೆಯಲ್ಲಿ ವೃದ್ಧನನ್ನು ಹಣ ನೀಡದ್ದಕ್ಕೆ ತಳ್ಳಿದ ದೃಶ್ಯ ಸೆರೆಯಾಗಿದ್ದು ತಕ್ಷಣ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾಲ್ಲೂಕು ಆರೋಗ್ಯಾಧಿಕಾರಿ ಗಿರಿದಾಸ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಕರೆ ಸ್ವೀಕರಿಸಲಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿ ವಿಶ್ವೇಶ್ವರಯ್ಯ ಅವರು ಕೂಡ ಕರೆ ಸ್ವೀಕರಿಸಿಲ್ಲ.





