Mysore
29
overcast clouds

Social Media

ಶುಕ್ರವಾರ, 03 ಜುಲೈ 2026
Light
Dark

ಮಳೆ ನೀರು ಮೋರಿ ಸೇರಲು ಜಾಗವಿಲ್ಲ; ಸವಾರರಿಗೆ ಯಾತನೆ ತಪ್ಪಿದ್ದಲ್ಲ 

ಕೆಲವಡೆ ಅವೈಜ್ಞಾನಿಕ ಫುಟ್‌ಪಾತ್ ನಿರ್ಮಾಣ; ಸರಾಗವಾಗಿ ನೀರು ಹರಿಯಲು ತಡೆ

ಮೈಸೂರು: ನಗರದಲ್ಲಿ ರಾತ್ರಿ-ಹಗಲು ಎನ್ನದೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಹಲವು ರಸ್ತೆಗಳಲ್ಲಿ ಮಳೆ ನೀರು ಮೋರಿ, ಚರಂಡಿಗೆ ಸೇರಲು ಜಾಗವಿಲ್ಲದೆ ರಸ್ತೆಯಲ್ಲೇ ನಿಲ್ಲುವಂತಾಗಿದೆ. ಅವೈಜ್ಞಾನಿಕವಾಗಿ ಫುಟ್‌ಪಾತ್‌ಗಳನ್ನು ನಿರ್ಮಾಣ ಮಾಡಿರುವುದರಿಂದ ಸರಾಗವಾಗಿ ನೀರು ಹರಿಯಲು ಜಾಗವಿಲ್ಲ. ಹೀಗಾಗಿ ವಾಹನ ಸವಾರರು, ಸಾರ್ವಜನಿಕರು ಫಜೀತಿ ಅನುಭವಿಸುತ್ತಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಹಿಂಭಾಗದ ರಸ್ತೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆಯ ಎದುರಿನ ಮಾರ್ಗ, ಪಡುವಾರಹಳ್ಳಿ ಮಹಾರಾಣಿ ವಾಣಿಜ್ಯ ನಿರ್ವಹಣಾ ಕಾಲೇಜು ಎದುರಿನ ರಸ್ತೆ, ಯಾದವಗಿರಿಯ ಆಕಾಶವಾಣಿ ಕೇಂದ್ರದ ರಸ್ತೆ, ಅರವಿಂದನಗರ, ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆ, ಸಿದ್ಧಾರ್ಥ ನಗರದ ಕೇಂದ್ರ ಅಬಕಾರಿ ಸೀಮಾ ಸುಂಕ ಕಚೇರಿ ಮಾರ್ಗದ ರಸ್ತೆಯಲ್ಲಿ ಇಂತಹ ಅಧ್ವಾನಗಳು ಕಣ್ಣಿಗೆ ರಾಚುತ್ತಿವೆ.

ಜೋಡಿ ರಸ್ತೆಯನ್ನು ನಿರ್ಮಾಣ ಮಾಡುವಾಗ ಹಾಗೂ ರಸ್ತೆ ಅಗಲೀಕರಣಗೊಳಿಸಿ ಫುಟ್‌ಪಾತ್‌ಗಳನ್ನು ನಿರ್ಮಾಣ ಮಾಡುವಾಗ ವೈಜ್ಞಾನಿಕ ಕ್ರಮಗಳನ್ನು ಅನುಸರಿಸದಿರುವುದು ಮಳೆ ಬಂದಾಗ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗಿದೆ. ಇದು ಒಂದೆರಡು ಮುಖ್ಯರಸ್ತೆಗಳ ಕಥೆಯಲ್ಲ. ಹಲವಾರು ಬಡಾವಣೆಗಳ ವ್ಯಥೆಯಾಗಿದೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಾಲೆ ಎದುರು ಅಂದವಾಗಿ ಫುಟ್‌ಪಾತ್ ನಿರ್ಮಿಸಿ ವಿದ್ಯುತ್ ದೀಪಗಳನ್ನು ಅಳವಡಿಸಿದ್ದರೂ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ. ಅಲ್ಲಲ್ಲಿ ರಂಧ್ರವನ್ನು ಕೊರೆದಿದ್ದರೂ ಮಣ್ಣು ಸೇರಿಕೊಂಡು ನೀರು ನಿಂತಲ್ಲೇ ನಿಲ್ಲುತ್ತಿದೆ.

ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಎದುರಿನ ಸಿಎಫ್‌ಟಿಆರ್‌ಐ ವಸತಿಗೃಹಕ್ಕೆ ಹೋಗುವ ಮಾರ್ಗವು ಜಲಾವೃತವಾಗಿದೆ. ಇದರಿಂದ ಸಿಬ್ಬಂದಿ ವಾಹನಗಳಲ್ಲಿ ಓಡಾಡಲು ಹರಸಾಹಸ ಪಡುವಂತಾಗಿದೆ. ವಿಜಯನಗರ ಮೊದಲ ಹಂತದ ಕಸಾಪ ವೃತ್ತದಿಂದ ಉಪ ನೋಂದಣಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲೂ ಅದೇ ಸಮಸ್ಯೆಯುಂಟಾಗಿದೆ.

ಮಳೆಗೆ ಕಿತ್ತು ಬಂದ ಡಾಂಬರು: ದಸರಾ ಮಹೋತ್ಸವದ ಯುವ ಸಂಭ್ರಮದ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗಮಂದಿರದ ರಸ್ತೆಯಲ್ಲಿ ಹಾಕಲಾಗಿದ್ದ ಡಾಂಬರು ಕಿತ್ತು ಬಂದಿದೆ. ಮಳೆ ಮುಂದುವರಿದಷ್ಟು ಈ ರಸ್ತೆ ಸಂಪೂರ್ಣ ಹಾಳಾಗಲಿದೆ. ಮತ್ತೊಂದೆಡೆ ಕುಕ್ಕರಹಳ್ಳಿ ಕೆರೆಯಿಂದ ಮೈಸೂರು ವಿವಿಯ ಕಾರ್ಯಸೌಧದ ಕಡೆಗೆ ತೆರಳುವ ರಸ್ತೆಯಲ್ಲಿ ಹಾಕಿದ್ದ ಡಾಂಬರು ಹಾಳಾಗಿ ಮ್ಯಾನ್‌ಹೋಲ್ ಕುಸಿದಿರುವ ಕಾರಣ ರಸ್ತೆಯಲ್ಲಿ ನೀರು ಹರಿಯುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದೆ.

ಮಾನಸಗಂಗೋತ್ರಿ ಬಯಲು ರಂಗಮಂದಿರದ ರಸ್ತೆಯಲ್ಲಿ ಡಾಂಬರು ಕಿತ್ತು ಬಂದಿರುವುದು.

ಮೈಸೂರಿನ ಹಲವು ಕಡೆಗಳಲ್ಲಿ ಫುಟ್‌ಪಾತ್ ನಿರ್ಮಾಣ ಮಾಡುವಾಗ ಮಳೆ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಅದಕ್ಕೆ ಕಬ್ಬಿಣದ ಪೈಪ್, ಗ್ರಿಲ್‌ಗಳನ್ನು ಅಳವಡಿಸದೆ ಬಿಟ್ಟಿರುವ ಕಾರಣ ಮಣ್ಣು ತುಂಬಿಕೊಂಡಿದೆ. ಮಳೆ ನೀರು ಯಥೇಚ್ಛ ವಾಗಿ ನಿಲ್ಲುವ ಸ್ಥಳಗಳ ಮಾಹಿತಿ ಪಡೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.
-ಶಿವಕುಮಾರ್, ಮಹಾಪೌರರು

 

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!