ಮೈಸೂರು: ನಗರದ ಜೆಕೆ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ ಮಹಿಳಾ ದಸರೆಯಲ್ಲಿ ನೂರಾರು ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳ ಪ್ರದರ್ಶನದೊಂದಿಗೆ ಮಾರಾಟಕ್ಕೆ ಅಣಿಯಾಗಿದ್ದಾರೆ. ಮಹಿಳಾ ದಸರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಐದು ದಿನ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ, ಮಂಗಳಮುಖಿಯರಿಗೆ, ವಿಶೇಷಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಸ್ತ್ರೀ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಮಹಿಳಾ ಸ್ವಸಹಾಯ ಸಂಘಕ್ಕೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ಎಂದರು.
ಜಾನಪದ ಕಲಾ ಪ್ರದರ್ಶನದೊಂದಿಗೆ ಮೇಳಕ್ಕೆ ಅದ್ದೂರಿ ಆರಂಭ ನೀಡಲಾಯಿತು. ಮೇಳದಲ್ಲಿ ತಿಂಡಿ ತಿನಿಸು, ಬಟ್ಟೆಬರೆಯಿಂದ ಹಿಡಿದು ನಾನಾ ಉತ್ಪನ್ನಗಳ ಪ್ರದರ್ಶನ ಇದ್ದು, ನಾನಾ ಸ್ಪರ್ಧೆಗಳಿಗೂ ಅವಕಾಶ ನೀಡಲಾಗಿದೆ.
ಶಾಸಕ ಎಲ್.ನಾಗೇಂದ್ರ ಮಾತನಾಡಿದರು. ಮೇಯರ್ ಶಿವಕುಮಾರ್, ಉಪ ಮೇಯರ್ ರೂಪಾ, ಜಿಪಂ ಉಪ ಕಾರ್ಯದರ್ಶಿ ಪ್ರೇಮಕುಮಾರ್, ನಗರ ಪಾಲಿಕೆ ಸದಸ್ಯರಾದ ಪ್ರಮಿಳಾ ಭರತ್, ಸಮಿತಿಯ ಅಧ್ಯಕ್ಷರಾದ ಸುನಾಂದ ರಾಜ್, ಹೇಮ ನಂದೀಶ್, ತನುಜಾ ಮಹೇಶ್ ಇತರರು ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ಜಾನಪದ ಕಲಾ ತಂಡಗಳ ಮೂಲಕ ಸ್ವಾಗತಿಸಲಾಯಿತು. ೪೫ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳಿಗೆ ಇಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಟೇಪ್ ಕತ್ತರಿಸುವ ಮೂಲಕ ಎಸ್.ಟಿ.ಸೋಮಶೇಖರ್ ವಸ್ತುಗಳ ಮಾರಾಟಕ್ಕೆ ಚಾಲನೆ ನೀಡಿದರು.





