ಲಕ್ಷ್ಮಿಕಾಂತ್ ಕೊಮಾರಪ್ಪ
ಹತ್ತಾರು ಸಮಸ್ಯೆಗಳ ನಡುವೆಯೂ ಕಾಫಿ ಬೆಳೆದಿದ್ದವರಿಗೆ ನಷ್ಟದ ಭೀತಿ; ಮತ್ತಷ್ಟು ದರ ಕುಸಿತಗೊಳ್ಳುವ ಸಾಧ್ಯತೆ
ಸೋಮವಾರಪೇಟೆ: ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ವನ್ಯಮೃಗಗಳ ಹಾವಳಿ ಹೀಗೆ ಹತ್ತಾರು ಸಮಸ್ಯೆಗಳ ನಡುವೆಯೂ ಜಿಲ್ಲೆಯಲ್ಲಿ ಕಾಫಿ ಬೆಳೆಯಲಾಗಿದ್ದು, ದರ ಕುಸಿತದ ಬರೆಯಿಂದ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ಜಿಲ್ಲೆಯ ಎಲ್ಲೆಡೆ ಕಾಫಿ ಕೊಯ್ಲು ಪ್ರಾರಂಭಗೊಂಡು, ಬೆಳೆಗಾರರು ಫಸಲನ್ನು ಮನೆಗೆ ತುಂಬಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಆದರೆ, ವರ್ಷದ ಪ್ರಾರಂಭದಲ್ಲಿ ಕಾಫಿಗೆ ಇದ್ದ ಬೆಲೆ ದಿನದಿಂದ ದಿನಕ್ಕೆ ಇಳಿಮುಖಗೊಳ್ಳುತ್ತಿರುವುದು ಬೆಳೆಗಾರರ ನಿದ್ದೆಗೆಡಿಸಿದೆ. ಪ್ರಸಕ್ತ ಸಾಲಿನಲ್ಲಿ ಕೆಲವೆಡೆ ಕಾಫಿ -ಸಲು ಉತ್ತಮವಾಗಿದ್ದು, ಕಾಫಿ ಕೊಯ್ಲು ಮಾಡಿ ಒಣಗಿಸಿ ಮಾರುಕಟ್ಟೆಗೆ ತರುವ ವೇಳೆಗೆ ಮತ್ತಷ್ಟು ಬೆಲೆ ಇಳಿಮುಖಗೊಳ್ಳಬಹುದು ಎಂದು ಬೆಳೆಗಾರರ ಆತಂಕವಾಗಿದೆ.
ಇನ್ನೊಂದೆಡೆ ಕಾರ್ಮಿಕರನ್ನು ಹೆಚ್ಚಿನ ಬೆಲೆತೆತ್ತು ಕೆಲಸ ಮಾಡಿಸುತ್ತಿರುವುದನ್ನು ಕಾಣಬಹುದು. ಕೊಪ್ಪಳ, ರಾಯಚೂರು ಸೇರಿದಂತೆ ತಮಿಳುನಾಡು, ಅಸ್ಸಾಂ ರಾಜ್ಯಗಳ ಸಾವಿರಾರು ಕಾರ್ಮಿಕರು ಕೆಲಸಕ್ಕಾಗಿ ಕೊಡಗು ಜಿಲ್ಲೆಗೆ ಆಗಮಿಸಿದ್ದರಿಂದ ಕೊಂಚ ಮಟ್ಟಿಗೆ ಬೆಳೆಗಾರರು ನಿರಾಳರಾಗಿದ್ದಾರೆ. ಆದರೂ, ಕಾರ್ಮಿಕರಿಗೆ ದುಬಾರಿ ಬೆಲೆ ತೆತ್ತುವುದರೊಂದಿಗೆ, ಏಜೆಂಟ್ ಕಮಿಷನ್, ವಾಹನ ಬಾಡಿಗೆ ಹಾಗೂ ಹೆಚ್ಚಿನ ಖರ್ಚನ್ನು ಬೆಳೆಗಾರರು ನಿಭಾಯಿಸಬೇಕಿದೆ.
ಕೆಲವರು ಹೊರ ಜಿಲ್ಲೆಯಿಂದ ಆಗಮಿಸುವ ಕೆಲಸಗಾರರನ್ನು ಗ್ರಾಮದ ಒಂದು ಮನೆಯಲ್ಲಿ ಇರಲು ಬಿಟ್ಟು, ಬೆಳೆಗಾರರಲ್ಲಿ ಕೆಲಸಕ್ಕೆ ಕಳಿಸುವುದು ಕಂಡುಬರುತ್ತಿದೆ. ಹಲವು ಗ್ರಾಮಗಳಲ್ಲಿ ರೈತರು ಹೆಚ್ಚಿನ ಹಣ ನೀಡದೆ, ನಿಗದಿತ ಹಣ ನೀಡಿ ಕೆಲಸ ಮಾಡಿಸಿಕೊಳ್ಳಬೇಕೆಂದು ಮಾಡಿದ ನಿರ್ಣಯ ಇಲ್ಲಿ ಕೆಲಸಕ್ಕೆ ಬರುತ್ತಿಲ್ಲ. ಹೊರ ಜಿಲ್ಲೆ, ರಾಜ್ಯಗಳಿಂದ ಆಗಮಿಸಿರುವ ಸಾಕಷ್ಟು ಕಾರ್ಮಿ ಕರು ಸ್ಥಳೀಯ ಭಾಷೆಯನ್ನು ಕಲಿತು ಕೆಲಸ ಮಾಡುತ್ತಿದ್ದಾರೆ.
೧೬ ವರ್ಷಗಳ ಹಿಂದೆ ಅಸ್ಸಾಂನಿಂದ ಹಾಸನ ಜಿಲ್ಲೆಯ ಹೊಸೂರಿಗೆ ಕುಟುಂಬದೊಂದಿಗೆ ಆಗಮಿಸಿ ನೆಲೆ ನಿಂತಿದ್ದೇವೆ. ಕೆಲಸ ಇರುವಲ್ಲಿಗೆ ತೆರಳಿ ಕೆಲಸ ಮಾಡಿಕೊಡುತ್ತೇವೆ. ಕೇವಲ ಕಾಫಿ ಕೊಯ್ದು ಮಾತ್ರ ಮಾಡದೆ, ಉಳಿದ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಬಾಬು ‘ಆಂದೋಲನ’ಕ್ಕೆ ಮಾಹಿತಿ ನೀಡಿದರು.
ಮಕ್ಕಳು ಕೂಡ ಪೋಷಕರೊಂದಿಗೆ ಕಾಫಿ ತೋಟಕ್ಕೆ ಬಂದು ಸಂಜೆ ಮನೆಗೆ ಹಿಂದಿರುತ್ತಾರೆ. ತಾಲ್ಲೂಕಿನಲ್ಲಿ ೨೮,೫೯೦ ಹೆಕ್ಟೇರ್ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ೨೨,೯೦೦ ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ ೫೬೯೦ ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ರೋಬಸ್ಟಾ ಕಾಫಿ ಬೆಳೆಯುವ ಪ್ರದೇಶ ಹೆಚ್ಚುತ್ತಿದ್ದು, ಅರೇಬಿಕಾ ಕಡಿಮೆಯಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಸಾಧಾರಣ ಕಾಫಿ ಬೆಲೆಯೂ ಕಡಿಮೆಯಾಗುತ್ತಿದೆ. ಕಾಫಿಗೆ ಬೆಲೆ ಸ್ಥಿರವಾಗಿದ್ದಲ್ಲಿ ಮಾತ್ರ ಬೆಳೆಗಾರರಿಗೆ ತಾವು ಬೆಳೆದ ಫಸಲಿಗೆ ಇಂತಿಷ್ಟೇ ಹಣ ಬರಬಹುದು ಎಂಬ ನಂಬಿಕೆ ಇರುತ್ತದೆ. ಆದರೆ ದಿನದಿಂದ ದಿನಕ್ಕೆ ಕಾಫಿ ಬೆಲೆ ಇಳಿಕೆ ಆಗುತ್ತಿರುವುದು ನೆಮ್ಮದಿ ಕೆಡಿಸುತ್ತಿದೆ.
” ಕಾಫಿ ಫಸಲು ಸ್ಥಳೀಯವಾಗಿ ಕಡಿಮೆ ಇರುತ್ತಿತ್ತು. ಇತ್ತೀಚೆಗೆ ರೈತರ ಖಾಲಿ ಭೂಮಿ, ಖಾಲಿ ಗುಡ್ಡ ಪ್ರದೇಶವನ್ನು ಹಾಗೂ ಗದ್ದೆಯನ್ನು ತೋಟವನ್ನಾಗಿ ಮಾರ್ಪಡಿಸಿ ಕಾಫಿ ತೋಟಮಾಡಿ -ಸಲು ಬೆಳೆಯಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ಜಾಸ್ತಿಯಾಗುತ್ತಿದೆ. ಇದನ್ನು ಕುಯ್ಲು ಮಾಡಲು ಸ್ಥಳೀಯರೊಡನೆ ಹೊರ ಜಿಲ್ಲೆಯ ಕಾರ್ಮಿಕರ ಅವಶ್ಯ ಹೆಚ್ಚಾಗಿದೆ.”
-ವಿನೋದ್, ಕಾಫಿ ಬೆಳೆಗಾರರು, ಸೋಮವಾರಪೇಟೆ
” ಐದು ವರ್ಷಗಳಿಂದ ನಾವು ಕಾಫಿ ಕೊಯ್ಲು ಮಾಡಲು ಕೊಡಗಿಗೆ ಬರುತ್ತಿದ್ದೇವೆ. ನಮ್ಮಲ್ಲಿ ಈ ಸಮಯದಲ್ಲಿ ಹೊಲದಲ್ಲಿ ಯಾವುದೇ ಕೆಲಸಗಳು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಕೊಡಗಿಗೆ ಬಂದು ಕಾಫಿ ಕೊಯ್ಲು ಮುಗಿಸಿ ನಂತರ ನಮ್ಮೂರಿಗೆ ತೆರಳುತ್ತೇವೆ.”
-ಚತ್ರಪ್ಪ, ಕಾರ್ಮಿಕ, ಕುಸ್ಟಿಗೆ ಗ್ರಾಮ, ಕೊಪ್ಪ
ಬೆಳೆಗೆ ದುಪ್ಪಟ್ಟು ಖರ್ಚು…: ಕಾಫಿ ಬೆಳೆಗಾರರು ಈಗಾಗಲೇ ದುಪ್ಪಟ್ಟು ಖರ್ಚು ಮಾಡಿ ಕಾಫಿ ವ್ಯವಸಾಯ ಮಾಡುತ್ತಿರುವುದು ಕಂಡುಬರುತ್ತಿದೆ. ಗೊಬ್ಬರ, ಕ್ರಿಮಿನಾಶಕ, ಕಾರ್ಮಿಕರ ವೇತನ ಸೇರಿದಂತೆ ಎಲ್ಲವೂ ದುಬಾರಿಯಾಗಿದೆ. ಈಗ ಇನ್ನಷ್ಟು ಹೆಚ್ಚು ಬೆಲೆ ನೀಡಿ ಕಾಫಿಕೊಯ್ಲು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕಾಫಿಗೆ ದರ ಕುಸಿದಲ್ಲಿ ಕಾಫಿ ತೋಟಗಳ ಅವನತಿ ಪ್ರಾರಂಭಗೊಳ್ಳಲಿದೆ ಎನ್ನುತ್ತಾರೆ ಸ್ಥಳೀಯ ಕಾಫಿ ಬೆಳೆಗಾರರು.





