ವಿಜಯಪುರ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ಸಚಿವ ಆರ್ಬಿ ತಿಮ್ಮಾಪುರ ನೀಡುರುವ ಹೇಳಿಕೆಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರಜ್ವಲ್ರನ್ನು ಭಗವಾನ್ ಶ್ರೀಕೃಷ್ಣಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದಾರೆ. ಈ ವಿವಾದಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಬಕಾರಿ ಸಚಿವ ಬಿಆರ್ ತಿಮ್ಮಾಪುರ ಪ್ರಜ್ವಲ್ ಪ್ರಕರಣ ಸಂಬಂಧ ಮಾತನಾಡಿ ಪ್ರಜ್ವಲ್ ರೇವಣ್ಣನವರ ಪೆನ್ಡ್ರೈವ್ ಪ್ರಕರಣ ನೋಡಿದರೆ ದೇಶದಲ್ಲಿ ಇದಕ್ಕಿಂತ ಕೆಟ್ಟದ್ದೇನೂ ನಡೆದಿಲ್ಲ ಎನ್ನುವುದು ನನ್ನ ಭಾವನೆ. ಇದು ಗಿನ್ನಿಸ್ ದಾಖಲೆಯಾಗಬಹುದು. ಭಗವಾನ್ ಶ್ರೀಕೃಷ್ಣನ ಭಕ್ತಿಭಾವಕ್ಕೆ ಸ್ತ್ರೀಯರು ಪರವಶರಾಗುತ್ತಿದ್ದರು. ಆದರೆ ಪ್ರಜ್ವಲ್ ಪ್ರಕರಣ ಹಾಗಲ್ಲ. ಕೃಷ್ಣನ ದಾಖಲೆ ಮುರಿಯಲು ಈತ ಬಯಸಿದ್ದ ಎನ್ನಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ವಿಜಯಪುರ ನಗರದ ಪಾಟೀಲ್ ಗಾರ್ಡೇನಿಯಾದಲ್ಲಿ ಸಭೆ ನಡೆಸಿದ ಸಚಿವರು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಸರ್ಕಾರದ ಜನಪರ ಕೊಡುಗೆಗಳಿಗೆ ಜನರು ಮೆಚ್ಚಿದ್ದಾರೆ. ನಮ್ಮ ಯೋಜನೆಗಳಿಂದ ಜನ ಕಾಂಗ್ರೆಸ್ ಪರವಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ವಿಜಯಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೂ ಆಲಗೂರು ಗೆಲವು ಖಚಿತ ಎಂದಿದ್ದಾರೆ.




