ಬೆಂಗಳೂರು: ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರಿ ಹಂಸ ಮೊಯ್ಲಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ರಾಜಕೀಯದ ಕಾರ್ಯ ಹಿನ್ನೆಲೆಯಲ್ಲಿ ಛತ್ತೀಸ್ಗಢ ಪ್ರವಾಸದಲ್ಲಿದ್ದ ವೀರಪ್ಪ ಮೊಯ್ಲಿ ಅವರು ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದರು. ನಾಳೆ ಬೆಳಿಗ್ಗೆ ಪುತ್ರಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
ಹಂಸ ಮೊಯ್ಲಿ ಅವರು ಭರತನಾಟ್ಯ ಕಲಾವಿದೆ ಆಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ತಮ್ಮ ಕಲೆ ಪ್ರದರ್ಶನ ನೀಡಿದ್ದರು. ಜೊತೆಗೆ ನೃತ್ಯ ಸಂಯೋಜಕಿಯೂ ಆಗಿದ್ದರು. ಕೇವಲ ಭರತನಾಟ್ಯ ಕಲಾವಿದೆ ಅಲ್ಲದೇ ಸಿನಿಮಾ ರಂಗದಲ್ಲೂ ಅವರು ಗುರುತಿಸಿಕೊಂಡಿದ್ದರು. ದೇವದಾಸಿಯರ ಜೀವನಾಧಾರಿತ ತಮಿಳು ಚಿತ್ರ ಶೃಂಗಾರಂನಲ್ಲಿ ಅವರು ಅಭಿನಯಿಸಿದ್ದಾರೆ.
ಹಂಸ ಮೊಯ್ಲಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಬದಲಾದ ಹವಾಮಾನದಿಂದ ಏಕಾಏಕಿ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ನಾಳೆ ಹಂಸ ಮೊಯ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದ್ದು, ಇಂದು ಪಾರ್ಥಿವ ಶರೀರವನ್ನು ತಮ್ಮ ನಿವಾಸದಲ್ಲೇ ಇರಿಸಲಾಗಿದೆ. ಗಣ್ಯಾತಿಗಣ್ಯರು ಬಂದು ಹಂಸ ಮೊಯ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.





