Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸದನದಲ್ಲಿ ಸದ್ದು ಮಾಡಿದ ವಾಲ್ಮೀಕಿ ಹಗರಣ ; ಸರ್ಕಾರ-ವಿಪಕ್ಷ ನಾಯಕರ ನಡುವೆ ವಾಕ್ಸಮರ

ಬೆಂಗಳೂರು : ಮುಂಗಾರು ಅಧಿವೇಶನದ ೨ನೇ ದಿನವಾದ ಇಂದು ಸಹ ಸದನದಲ್ಲಿ ವಾಲ್ಮೀಕಿ ನಿಗಮದ ಹಗರಣ ಸಾಕಷ್ಟು ಸದ್ದು ಮಾಡಿದೆ. ಅಲ್ಲದೆ ಸರ್ಕಾರ ಹಾಗೂ ವಿಪಕ್ಷ ನಾಯಕರ ನಡುವೆ ಜಟಾಪಟಿ ತಾರಕಕ್ಕೇರಿತು.

ಬಿಜೆಪಿಯ ಮಾಜಿ ಡಿಸಿಎಂ ಅಶ್ವಥ್‌ ನಾರಾಯಣ್‌ ಮಾತನಾಡಿ, ಸದನದಲ್ಲಿ ಕಾಂಗ್ರೆಸ್‌ ನವರು ಯಾರು ಇಲ್ಲ. ಸಿಎಂ ಇಲ್ಲ. ಸಚಿವರು ಇಲ್ಲ. ಖುದ್ದು ಸಿಎಂ ಮೇಲೆ ಆರೋಪವಿದೆ. ಆದರೆ ಇದರ ಚರ್ಚೆ ವೇಳೆ ಸಿಎಂ ಇಲ್ಲ. ಇದೇನಾ ಅವರ ಜವಾಬ್ದಾರಿ..? ಸದನ ನಡೀತಿದೆ, ಸದನಕ್ಕೆ ಬರಲು ಸಿಎಂ ಸಿದ್ದರಾಮಯ್ಯಗೆ ಪುರುಸೊತ್ತಿಲ್ವಾ..? ಕರೆಸಿ ಸಿಎಂನಾ ಎಂದು ಕಿಡಿಕಾರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಡಿಸಿಎಂ ಡಿ‌.ಕೆ ಶಿವಕುಮಾರ್, ಹೌದು ನೀವಯ ಲೂಟಿ ಮಾಡಿದ್ದಕ್ಕೆ ಜನ ನಮ್ಮನ್ನ ಇಲ್ಲಿ ಕೂರಿಸಿರೋದು. ನೀವು ಮಾಡಬಾರದ ಲೂಟಿ ಮಾಡಿದ್ದಕ್ಕೆ ನಿಮ್ಮನ್ನ ಜನ ಅಲ್ಲಿ ಕೂರಿಸಿರೋದು. ನೀನು ಲೂಟಿ ಮಾಡುವವರ ಪಿತಾಮಹ ಎಂದು  ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಬಳಿಕ ಡಿಸಿಎಂ ನನ್ನ ಹೆಸರು ಹೇಳಿ ಆರೋಪ ಮಾಡಿದ್ದಾರೆ. ಹಿಟ್‌ ಅಂಡ್‌ ರನ್‌ ಹೇಳಿಕೆ ಕೊಟ್ಟಿದ್ದಾರೆ. ನಾನು ಮಾಡಬಾರದ್ದು ಏನು ಮಾಡಿದ್ದೀನಿ ಅಂತಾ ಡಿಕೆಶಿ ಹೇಳಬೇಕು. ನಾವು ನಿಮ್ಮ ಹಾಗೆ ಓಡಿ ಹೋಗಲ್ಲ, ಇಲ್ಲೇ ಇರ್ತೇವೆ. ಡಿ.ಕೆ ಶಿವಕುಮಾರ್‌ ಕ್ಷಮೆ ಕೇಳಬೇಕು ಎಂದು ಅಶ್ವಥ್‌ ನಾರಾಯಣ್‌ ಸೇರಿ ಬಿಜೆಪಿ ಶಾಸಕರು ಪಟ್ಟು ಹಿಡಿದರು. ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ಉಂಟಾಯಿತು.

ನಂತರ ನಿಗಮದ ಅಕ್ರಮ ಪ್ರಕರಣ ಕುರಿತು ವಿಪಕ್ಷ ನಾಯಕ ಆರ್‌ ಅಶೋಕ್‌ ಮಾತನಾಡಿ, ಸಿಎಂ ಅವರು ೧೮೭ ಕೋಟಿ ಅಕ್ರಮ ವರ್ಗಾವಣೆ ಆಗಿಲ್ಲ ಆಗಿರೋದು ೮೯.೬೨ ಕೋಟಿ ಅಂದರು. ಅಲ್ಲಿಗೆ ಅಕ್ರಮ ಆಗಿರೋದನ್ನ ಸಿಎಂ ಒಪ್ಪಿಕೊಂಡ ಹಾಗಾಯ್ತಲ್ಲ. ಕಳವು ಮಾಡಲು ೧೮೭ ಕೋಟಿ ವರ್ಗಾವಣೆ ಮಾಡಿದ್ರೆ ಹಗರಣ ಸಹ ೧೮೭ ಕೋಟಿ ಅಷ್ಟೇ ಆಗಿದೆ ಅಂತರ್ಥ. ಸಿಎಂ ೮೯.೬೩ ಕೋಟಿ ಅಂತ ಹೇಗೇ ಹೇಳುತ್ತಾರೆ. ಇದು ಪಕ್ಕಾ ೧೮೭ ಕೋಟಿ ಅಕ್ರಮನೇ. ಈ ಕಳ್ಳತನ ಸಿಎಂ ಗೊತ್ತು ಅಂದ್ರು, ಗೊತ್ತಿಲ್ಲ ಅಂದ್ರು ಅವರದ್ದೇ ತಪ್ಪು . ಯಾಕಂದ್ರೆ ಸಿಎಂ ಅವರೇ ಯಜಮಾನರು ಎಂದು ಆರೋಪಿಸಿದರು.

ಅಲ್ಲದೆ ಈ ವಾಲ್ಮೀಕಿ ಪ್ರಕರಣದಲ್ಲಿ ಎಸ್‌ ಐಟಿ ವಿಫಲ ಆಗಿದೆ. ಈ ಪ್ರಕರಣದಲ್ಲಿ ಎಸ್ಟಿ ಸಮುದಾಯಕ್ಕೆ ಅನ್ಯಾಯ ಆಗಿದೆ.  ಅವರ ಶಾಪ ಸರ್ಕಾರಕ್ಕೆ ತಟ್ಟಬಾರದು ಅಂದರೆ ೧೮೭ ಕೋಟಿ ವಾಪಸ್‌ ಪಡೆಯಿರಿ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸಿಎಂ ನೈತಿಕ ಹೊಣೆ ಹೊತ್ತುರಾಜೀನಾಮೆ ಕೊಡಬೇಕು ಎಂದು ಅಶೋಕ್‌ ಆಗ್ರಹಿಸಿದರು. ಬಿಜೆಪಿ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಇದಕ್ಕೆ ಕಾಂಗ್ರೆಸ್‌ ನವರು ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಮತ್ತೆ ಗದ್ದಲ ಶುರುವಾಗಿ ವಾಕ್ಸಮರ ತಾರಕಕ್ಕೇರಿತು.

Tags: