Mysore
32
clear sky

Social Media

ಬುಧವಾರ, 04 ಮಾರ್ಚ್ 2026
Light
Dark

ಗಂಗಾ ಕಲ್ಯಾಣ ಪೋರ್ಟಲ್‌ನಲ್ಲೇ ವಿದ್ಯುತ್‌ ಮೂಲಸೌಕರ್ಯದ ಸ್ಥಿತಿಗತಿ ಮಾಹಿತಿ: ಇಂಧನ ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ ಕಲ್ಪಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಪೋರ್ಟಲ್‌ನ ಹೊಸ ಆಯ್ಕೆಯನ್ನು ಅನಾವರಣಗೊಳಿಸಿದ ಬಳಿಕ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವರು, “ಯೋಜನೆಯಲ್ಲಿ ಪಾರದರ್ಶಕತೆ, ಸಾರ್ವಜನಿಕರಿಗೆ ಸುಲಭ ಮಾಹಿತಿ ಒದಗಿಸಲು ಈ ಹೊಸ ಆಯ್ಕೆಯನ್ನು ಪರಿಚಯಿಸಲಾಗಿದೆ,” ಎಂದು ತಿಳಿಸಿದರು.

“ಕರ್ನಾಟಕ ಸರ್ಕಾರದ ಪ್ರಮುಖ ನೀರಾವರಿ ಯೋಜನೆಯಾದ ‘ಗಂಗಾ ಕಲ್ಯಾಣ’ ಅಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಸಣ್ಣ/ಅತಿ ಸಣ್ಣ ರೈತರ ಭೂಮಿಯಲ್ಲಿ ಕೊಳವೆಬಾವಿ ಕೊರೆಸಿ, ಪಂಪ್‌ಸೆಟ್ ಅಳವಡಿಸಿ, ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಕೊಳವೆ ಬಾವಿ ಕೊರೆದ ನಂತರ ವಿದ್ಯುತ್‌ ಮೂಲಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅರ್ಜಿ ಯಾವ ಹಂತದಲ್ಲಿದೆ ಎಂದು ತಿಳಿಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಪೋರ್ಟಲ್‌ ಅಲ್ಲೇ ಮಾಹಿತಿ ತಿಳಿಯಲು ಅವಕಾಶ ಕಲ್ಪಿಸಲಾಗಿದೆ. ರೈತ ಬಂಧುಗಳು ಈ ಸೇವೆಯ ಸದುಪಯೋಗ ಪಡೆಯಬೇಕು”, ಎಂದು ಸಚಿವರು ಹೇಳಿದರು.

“ಈ ವೈಶಿಷ್ಟ್ಯವು ಗಂಗಾ ಕಲ್ಯಾಣ ಯೋಜನೆಯ ಪೋರ್ಟಲ್‌ನಲ್ಲಿ ಲಭ್ಯವಿದ್ದು, ಮುಖಪುಟದಲ್ಲಿ ಒದಗಿಸಲಾದ ‘ಟ್ರ್ಯಾಕ್ ಅಪ್ಲಿಕೇಶನ್’ ಆಯ್ಕೆಯನ್ನು ಕ್ಲಿಕ್ ಮಾಡಿ ಪೂರಕ ವಿವರ ದಾಖಲಿಸಿದರೆ, ಫಲಾನುಭವಿಗಳು ತಮ್ಮ ಅರ್ಜಿಯ ಮಾಹಿತಿ ಪಡೆಯಬಹುದಾಗಿದೆ,” ಎಂದು ಹೇಳಿದರು.

 

 

Tags:
error: Content is protected !!