ನಿನ್ನೆ ( ಜನವರಿ 6 ) ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಕಡ್ಡಾಯ ಮಾಡಲು ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಅಂಗಡಿ, ಮುಂಗಟ್ಟು, ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಬಳಕೆ ಮಾಡುವುದರ ಜತೆಗೆ ಜಾಹೀರಾತು ಹಾಗೂ ಸೂಚನಾ ಫಲಕಗಳಲ್ಲಿಯೂ ಕನ್ನಡವನ್ನು ಹೆಚ್ಚಾಗಿ ಬಳಕೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.
ಕಳೆದ ಕೆಲ ದಿನಗಳ ಹಿಂದಷ್ಟೇ ಉನ್ನತ ಮಟ್ಟದ ಸಭೆ ನಡೆಸಿ ಮಾತನಾಡಿದ್ದ ಸಿದ್ದರಾಮಯ್ಯ ಸುಗ್ರೀವಾಜ್ಞೆ ಮೂಲಕ ಕನ್ನಡ ಕಡ್ಡಾಯ ಮಾಡುವುದಾಗಿ ತಿಳಿಸಿದ್ದರು. ಅಲ್ಲದೇ ಸುಗ್ರೀವಾಜ್ಞೆಯ ಮೂಲಕ ಜಾರಿಯಾಗಲಿರುವ ತಿದ್ದುಪಡಿ ಕಾನೂನಿನ ಅನ್ವಯ 2024ರ ಫೆಬ್ರವರಿ 28ರ ಒಳಗೆ ರಾಜ್ಯದಲ್ಲಿನ ಎಲ್ಲಾ ವಾಣಿಜ್ಯ ಕೈಗಾರಿಕೆ, ವ್ಯಾಪಾರ ಸಂಸ್ಥೆ, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನರಂಜನಾ ಕೇಂದ್ರ ಹೊಟೇಲ್ ಹಾಗೂ ಮುಂತಾದವುಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡವನ್ನು ಬಳಸಬೇಕು, ಉಳಿದ 40% ಜಾಗದಲ್ಲಿ ಇತರೆ ಭಾಷೆ ಇರಬೇಕು ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಅದರಂತೆ ನಿನ್ನೆ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದ್ದು, ರಾಜ್ಯಪಾಲರ ಅನುಮೋದನೆ ಬಿದ್ದ ಕೂಡಲೇ ಈ ತಿದ್ದುಪಡಿ ನಿಯಮ ಜಾರಿಗೆ ಬರಲಿದೆ.
ಏನಿದು ತಿದ್ದುಪಡಿ?
ಈ ಹಿಂದೆ 2023ರ ಮಾರ್ಚ್ನಲ್ಲಿ ಬಿಜೆಪಿ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ 2022ರ ಸೆಕ್ಷನ್ 17 ( 6 ) ರ ಅಡಿಯಲ್ಲಿ ನಾಮಫಲಕಗಳಲ್ಲಿ ಶೇ.50 ರಷ್ಟು ಕನ್ನಡ ಇರಬೇಕು ಎಂದು ತಿಳಿಸಿತ್ತು. ಇದೀಗ ಈ ಕಾಯಿದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದ್ದು ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯವಾಗಲಿದೆ.





