Mysore
35
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ಅಹಿಂದ ಹತ್ತಿಕ್ಕುತ್ತಿರುವ ಸಿದ್ದರಾಮಯ್ಯ : ಕುಮಾರಸ್ವಾಮಿ ಆರೋಪ

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆ.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅವಕಾಶವಾದಿ ರಾಜಕಾರಣ ಯಾವ ರೀತಿ ಇರುತ್ತದೆ ಎಂಬುದು ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಗಜ್ಜಾಹೀರು ಆಗಿದೆ. ಅಹಿಂದ ವರ್ಗದಲ್ಲಿ ಪ್ರಮುಖ ಭಾಗವಾಗಿರುವ ಮುಸ್ಲಿಂ ಜನಾಂಗದ ಮತಗಳಿಂದಲೇ ರಾಜಕೀಯ ಶಕ್ತಿ ಬಳಸಿಕೊಂಡ ಸಿದ್ದರಾಮಯ್ಯನವರು, ಈಗ ನೋಡಿದರೆ ಕಣದಲ್ಲಿರುವ ಯಾವೊಬ್ಬ ಮುಸ್ಲಿಂ ಅಭ್ಯರ್ಥಿಗೂ ಮತ ಹಾಕಬೇಡಿ ಎಂದು ಬಹಿರಂಗವಾಗಿ ಕರೆ ನೀಡಿದ್ದಾರೆ. ಸಾಮಾಜಿಕ ನ್ಯಾಯ ಎಂದರೆ ಹೀಗೆನಾ ಎಂದು ಖಾರವಾಗಿ ಪ್ರಶ್ನಿಸಿದರು.

ಅಹಿಂದ ವರ್ಗದ ನಾಯಕ ನಾನು, ಅಹಿಂದ ವರ್ಗಕ್ಕೆ ದೊಡ್ಡ ಕೊಡುಗೆ ನೀಡಿದ್ದೇನೆ ಎನ್ನುತ್ತಾರೆ. ಆದರೆ ವಾಲ್ಮೀಕಿ ನಿಗಮದ ಕಥೆ ಏನಾಯ್ತು? ಅಲ್ಲಿ ಲೂಟಿಯಾಗಿದೆ ಎಂಬುದನ್ನು ಸ್ವತಃ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಪ್ರತಿಪಕ್ಷಗಳು ಹೇಳಿದಷ್ಟು ಪ್ರಮಾಣದಲ್ಲಿ ದುಡ್ಡು ಹೊಡೆದಿಲ್ಲ, ಆದರೂ ಸ್ವಲ್ಪ ದುಡ್ಡು ಹೊಡೆದಿದ್ದೇವೆ ಎಂದು ಹೇಳುತ್ತಾರೆ. ದೇವರಾಜ್ ಅರಸು ನಿಗಮದ ಮೂಲಕ ಬಡವರಿಗೆ ನೀಡಲಾಗುವ ಗಂಗಾ ಕಲ್ಯಾಣ ಯೋಜನೆಯನ್ನು ಲೂಟಿ ಆಗಿದೆ. ಒಬ್ಬರು ಇಬ್ಬರಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಅಂತಹ ಆಯೋಜನೆಯನ್ನು ಕೂಡ ಇವರು ಬಿಟ್ಟಿಲ್ಲ ಎಂದು ಅವರು ಕಿಡಿಕಾರಿದರು.

ಉಪ ಚುನಾವಣೆಯನ್ನು ಹೇಗಾದರೂ ಗೆಲ್ಲಲೇಬೇಕು ಎಂದು ಇಡೀ ಸರ್ಕಾರ ಆಡಳಿತವನ್ನು ಗಾಳಿಗೆ ಬಿಟ್ಟು ದಾವಣಗೆರೆಯಲ್ಲಿ ಮೊಕ್ಕಂ ಹೂಡಿದೆ. ವಿಧಾನಸೌಧ ಸಂಪೂರ್ಣ ಖಾಲಿ ಆಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಜೊತೆಗೆ ಎಐಸಿಸಿ ರಾಜ್ಯ ಉಸ್ತುವಾರಿ ಆಗಿರುವ ವ್ಯಕ್ತಿ ಕೂಡ ಇಲ್ಲಿಯೇ ತಳವೂರಿದ್ದಾರೆ ಅವರು ಲೇವಡಿ ಮಾಡಿದರು.

ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಪಕ್ಷ ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವುಳ್ಳ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದಾರೆ. ಜನತೆಯ ಬಗ್ಗೆ ನಮಗೆ ಬದ್ಧತೆ ಇದೆ ಎಂದು ಕೊಚ್ಚಿಕೊಳ್ಳುತ್ತಿದ್ದಾರೆ. ಇವರಿಗೆ ಅದು ಯಾವ ರೀತಿಯ ಬದ್ಧತೆ ಇದೆಯೋ ನನಗೆ ಗೊತ್ತಿಲ್ಲ ಎಂದು ಟೀಕಿಸಿದರು ಕೇಂದ್ರ ಸಚಿವರು.

ಮುಖ್ಯಮಂತ್ರಿಗಳು ಉಪ ಚುನಾವಣೆ ಕಣದಲ್ಲಿ ತಮ್ಮ ಸರ್ಕಾರದ ಸಾಧನೆಗಳನ್ನು ಜನತೆಗೆ ಹೇಳುವುದನ್ನು ಬಿಟ್ಟು ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಪದ ಬಳಕೆಯನ್ನು ನಾನು ಗಮನಿಸಿದ್ದೇನೆ. ಇದು ಜವಾಬ್ದಾರಿಯುತ ಮುಖ್ಯಮಂತ್ರಿ ಪದವಿಯಲ್ಲಿ ಕೂತಿರುವ ವ್ಯಕ್ತಿಗೆ ಭೂಷಣವಲ್ಲ ಎಂದು ಕುಮಾರಸ್ವಾಮಿಯವರು ಕಟುವಾಗಿ ಟೀಕಿಸಿದರು.

Tags:
error: Content is protected !!