ಬೆಂಗಳೂರು : ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನ.೨ರಂದು ಆರ್ಎಸ್ಎಸ್ ಪಥಸಂಚಲನ ನಡೆಸಲು ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ.
ಆರ್ಎಸ್ಎಸ್ಗೆ ಪಥಸಂಚಲನ ನಡೆಸಲು ಅನುಮತಿ ನೀಡದ ಚಿತ್ತಾಪುರ ತಹಸಿಲ್ದಾರ್ ನಾಗಯ್ಯ ಅವರ ಆದೇಶವನ್ನು ಪ್ರಶ್ನಿಸಿ ಆರ್ಸ್ಎಸ್ ಪರವಾಗಿ ಅಶೋಕ್ ಪಾಟೀಲ್ ಎಂಬವರು ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ನಂತರ ನ.೨ಕ್ಕೆ ಪಥ ಸಂಚಲನ ನಡೆಸಲು ಅನುಮತಿ ನೀಡಿದ ಕಲಬುರಗಿ ಸಂಚಾರಿ ಪೀಠ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಸರ್ಕಾರ ಅದನ್ನು ಪರಿಗಣಿಸಬೇಕೆಂದು ಸೂಚಿಸಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಹಾಗೂ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಕಲಬುರಗಿ ಸಂಚಾರಿ ಪೀಠದ ನ್ಯಾಯಾಽಶ ಎ.ಜಿ.ಎಸ್.ಕಮಲ್ ಅವರು ನ.೨ರಂದು ಆರ್ಎಸ್ಎಸ್ ಪಥ ಸಂಚಲನಕ್ಕೆ ಅನುಮತಿ ನೀಡಿದರಾದರೂ, ಭಾನುವಾರವೇ ಪಥ ಸಂಚಲನ ನಡೆಸಬೇಕೆಂಬ ಆರ್ಎಸ್ಎಸ್ ಮನವಿಗೆ ಸಮ್ಮತಿಸಲಿಲ್ಲ. ಮುಂದಿನ ಅರ್ಜಿ ವಿಚಾರಣೆಯನ್ನು ಅ.೨೪ಕ್ಕೆ ಮುಂದೂಡಿತು.
ಇದನ್ನು ಓದಿ: ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನ ನಡೆಸಲು ಅನುಮತಿ: ಸಚಿವ ಪ್ರಿಯಾಂಕ್ ಖರ್ಗೆ ರಿಯಾಕ್ಷನ್
ವಾದ-ಪ್ರತಿವಾದ
ಇದಕ್ಕೂ ಮುನ್ನ ಅರ್ಜಿದಾರ ಅಶೋಕ್ ಪಾಟೀಲ್ ಪರ ವಾದ ಮಂಡಿಸಿದ ಅರುಣ್ ಶ್ಯಾಮ್ ಅವರು, ಅ.೧೭ಕ್ಕೆ ಚಿತ್ತಾಪುರದ ಕಾರ್ಯಕಾರಿ ಮ್ಯಾಜಿಸ್ಟ್ರೇಟ್ಗೆ ಅನುಮತಿ ಕೋರಲಾಗಿತ್ತು. ಅ.೧೮ರಂದು ಅವರು ತಿರಸ್ಕರಿಸಿದ್ದಾರೆ. ಪಥ ಸಂಚಲನವನ್ನು ರದ್ದುಪಡಿಸುವುದೇ ಇವರ ಉದ್ದೇಶ. ಹೀಗಾಗಿ ಅನುಮತಿ ನಿರಾಕರಿಸಿದ್ದಾರೆ ಎಂದು ವಾದ ಮಂಡಿಸಿದರು.
ರಾಜ್ಯದಲ್ಲಿ ಇದುವರೆಗೂ ೨೫೦ಕ್ಕೂ ಹೆಚ್ಚು ಪಥ ಸಂಚಲನ ನಡೆಸಲಾಗಿದೆ. ಎಲ್ಲಿಯೂ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಂದಿಲ್ಲ. ಎಲ್ಲಾ ಕಡೆಯೂ ಶಾಂತಿಯುತವಾಗಿ ನಡೆಸಿದ್ದೇವೆ. ಇಲ್ಲಿಯೂ ಅದೇ ರೀತಿ ನಡೆಸುತ್ತೇವೆ ಎಂದು ಅರ್ಜಿದಾರರು ಮುಚ್ಚಳಿಕೆ ಬರೆದುಕೊಟ್ಟರು.
ಮತ್ತೊಂದು ಸಂಘಟನೆ ಕೂಡ ಪ್ರತಿಭಟನೆ ಹಮ್ಮಿಕೊಂಡಿದೆ. ಭೀಮ್ ಆರ್ಮಿ, ದಲಿತ್ ಪ್ಯಾಂಥರ್ಸ್ ಕೂಡ ಪ್ರತಿಭಟನೆಗೆ ಅನುಮತಿ ಕೋರಿವೆ. ಕಾನೂನು ಸುವ್ಯವಸ್ಥೆ ಗಮನದಲ್ಲಿರಿಸಿಕೊಂಡು ಎರಡೂ ಸಂಘಟನೆಗಳಿಗೆ ಬೇರೆ ಬೇರೆ ದಿನ ಪಥ ಸಂಚಲನಕ್ಕೆ ಅನುಮತಿ ನೀಡಿ ಎಂದು ಸರ್ಕಾರದ ಪರ ವಕೀಲ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಅದು ಆಗುವುದಿಲ್ಲ. ಬೇರೆ ಸ್ಥಳವನ್ನು ನೀಡಿ. ಎಲ್ಲರನ್ನೂ ಒಳಗೊಳ್ಳಬೇಕು. ಸರ್ಕಾರಕ್ಕೂ ಆದ್ಯತೆ ನೀಡಬೇಕು. ನಿಮಗೂ ಆದ್ಯತೆ ನೀಡಬೇಕು. ರಸ್ತೆ ಮಾರ್ಗದಲ್ಲಿ ಎಷ್ಟು ಜನ ಭಾಗವಹಿಸುತ್ತಾರೆ ಎಂಬುದನ್ನು ಅರ್ಜಿದಾರರು ಸರ್ಕಾರಕ್ಕೆ ತಿಳಿಸಬೇಕು ಎಂದು ಹೈಕೋರ್ಟ್ ಸೂಚಿಸಿತು.
ಪ್ರಕರಣದ ಹಿನ್ನೆಲೆ
ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ್ದನ್ನು ಖಂಡಿಸಿ ನಡೆಸಲಾಗಿದ್ದ ಬಂದ್ ಮತ್ತು ಪ್ರತಿಭಟನೆಯ ನಡುವೆ, ಆರ್ಎಸ್ಎಸ್ ಸಂಘಟನೆಯು ನಡೆಸಲು ಯೋಜಿಸಿದ್ದ ಪಥ ಸಂಚಲನಕ್ಕೆ ತಾಲ್ಲೂಕು ಆಡಳಿತ ಅನುಮತಿ ನಿರಾಕರಿಸಿತ್ತು.
ಆರ್ಎಸ್ಎಸ್ ಪಥ ಸಂಚಲನದ ವಿರುದ್ಧವಾಗಿ ಭೀಮ್ ಆರ್ಮಿ ಸಂಘಟನೆ ಹಾಗೂ ಭಾರತೀಯ ದಲಿತ ಪ್ಯಾಂಥರ್ ಸಂಘದ ಸದಸ್ಯರು ಅದೇ ಮಾರ್ಗವಾಗಿ ಪಥ ಸಂಚಲನ ಮಾಡಲು ಅನುಮತಿ ಕೋರಿದ್ದರು.
ಭಾನುವಾರ ಎಲ್ಲಾ ಸಂಘಟನೆಗಳು ಒಂದೇ ಮಾರ್ಗದಲ್ಲಿ ಪಥ ಸಂಚಲನ ನಡೆಸಿದರೆ ಗೊಂದಲ ಉಂಟಾಗಿ ಕಾನೂನು ಸುವ್ಯವಸ್ಥೆ ಹಾಳಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಸಂಘಟನೆಗೆ ಪಥ ಸಂಚಲನ ಮಾಡಲು ಅನುಮತಿ ನೀಡುವುದಿಲ್ಲ ಎಂದು ತಹಸಿಲ್ದಾರ್ ನಾಗಯ್ಯ ತಿಳಿಸಿದ್ದರು.





