ತುಮಕೂರು : ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆ-ಸಾರ್ಥಕ ಸೇವೆಗಳ ಸಮರ್ಪಣಾ ಸಮಾವೇಶದಲ್ಲಿ ಏಕಕಾಲಕ್ಕೆ ಕಂದಾಯ ಇಲಾಖೆಯಿಂದ ಅತ್ಯಧಿಕ ಹಕ್ಕು ಪತ್ರ ಹಾಗೂ ಇತರ ದಸ್ತಾವೇಜುಗಳನ್ನು ವಿತರಿಸುವ ಮೂಲಕ ದಾಖಲೆ ನಿರ್ಮಾಣ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಎಲ್ಲಾ ಸಚಿವರು ಸಮಾವೇಶದಲ್ಲಿ ಭಾಗವಹಿಸಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 2 ಲಕ್ಷ ಜನ ಸಮಾವೇಶದಲ್ಲಿ ಭಾಗವಹಿಸಿದ್ದು, ಇದಕ್ಕಾಗಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳಿಂದ 3 ಸಾವಿರ ಬಸ್ ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು.
ತುಮಕೂರು ನಗರದ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಿಸಿ 60 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗಾಗಿ ಸುಮಾರು 4,500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು. ಸಮಾವೇಶದ ಬಳಿಕ ಮಧ್ಯಾಹ್ನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ವಿವಿಧ ನಾಯಕರು ಪ್ರತಿ ಹಂತದಲ್ಲೂ ಕಾರ್ಯಕ್ರಮದ ಪೂರ್ವ ತಯಾರಿಗಳನ್ನು ನಿಗಾವಹಿಸಿದ್ದರು.
2023ರ ಮೇ 20ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ.
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನಿಗಮಗಳ ನೌಕರರು ನಾಳೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಸಮಾವೇಶಕ್ಕೆ ಜನರನ್ನು ಕರೆ ತರಲು ಸಾರಿಗೆ ಬಸ್ ಗಳನ್ನು ನಿಯೋಜಿಸಲಾಗಿತ್ತು, ಮುಷ್ಕರದ ಕಾರಣಕ್ಕಾಗಿ ಚಾಲಕರು ಮತ್ತು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಸಾರಿಗೆ ವ್ಯವಸ್ಥೆ ಏರುಪೇರಾಗಲಿದೆ ಎಂಬ ಹಿನ್ನೆಲೆಯಲ್ಲಿ ಸಮಾವೇಶವನ್ನು ಒಂದು ದಿನ ಮೊದಲೇ ಪೂರ್ವ ನಿಗದಿ ಮಾಡಲಾಗಿದೆ.
ಅದರಂತೆ ಇಂದು ಬೃಹತ್ ಪ್ರಮಾಣದ ಸಮಾವೇಶ ನಡೆದಿದೆ. ಇದೇ ವೇಳೆ 662 ಕೋಟಿ ರೂ.ಗಳಷ್ಟು ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೆರವೇರಿಸಿದ್ದಾರೆ.
ಬಹುಮುಖ್ಯವಾಗಿ ಕಂದಾಯ ಇಲಾಖೆಯಿಂದ ಆಸ್ತಿಗಳ ದಾಖಲಾತಿಗಳು ಮತ್ತು ವಿವಿಧ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಗಿದೆ. ಕಳೆದ ಮೂರು ವರ್ಷಗಳಿಂದಲೂ ಕಂದಾಯ ಇಲಾಖೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡು ಸುಲಭ ವ್ಯವಸ್ಥೆಗಳನ್ನು ರೂಢಿಸಿಕೊಂಡಿದೆ.
ತುಮಕೂರು ಸಮಾವೇಶದಲ್ಲಿಂದು 1,52,492 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಅದೇ ರೀತಿ 14.39 ಲಕ್ಷ ಪೌತಿ ಖಾತೆಗಳನ್ನು ನೀಡಲಾಗಿದೆ. ಎರಡೂವರೆ ಲಕ್ಷ ಪೋಡಿ ಕೇಸ್ ಗಳನ್ನು ಪೂರ್ಣಗೊಳಿಸಲಾಗಿದೆ.
ಕಂದಾಯ ಇಲಾಖೆಯಲ್ಲಿ ಉಪ ವಿಭಾಗಾಧಿಕಾರಿ ಬಳಿ 73 ಸಾವಿರಕ್ಕೂ ಅಧಿಕ ಪ್ರಕರಣಗಳು ಅವಧಿ ಮೀರಿ ಬಾಕಿ ಉಳಿದಿದ್ದವು. ಅವುಗಳಲ್ಲಿ 60 ಸಾವಿರ ಪ್ರಕರಣಗಳನ್ನು ಸಮರೋಪಾದಿಯಲ್ಲಿ ಇತ್ಯರ್ಥ ಪಡಿಸಲಾಗಿದೆ.
ಮೂರು ವರ್ಷದ ಸಾಧನಾ ಸಮರ್ಪಣಾ ಸಮಾವೇಶದ ವೇಳೆಗೆ ಬಾಕಿ ಪ್ರಕರಣದ ಸಂಖ್ಯೆಯನ್ನು ಶೂನ್ಯಕ್ಕೆ ತರಬೇಕೆಂಬ ಗುರಿಯೊಂದಿಗೆ ಕಂದಾಯ ಸಚಿವ ಕೃಸ್ಣಭೈರೇಗೌಡ ಹರಸಾಹಸ ನಡೆಸಿದರು. ಆದರೆ ಕೆಲ ಅಧಿಕಾರಿಗಳ ಅಸಹಕಾರದಿಂದ ಅದು ಸಾಧ್ಯವಾಗಿಲ್ಲ. ಆದರೂ ಗರಿಷ್ಠ ಪ್ರಮಾಣದ ಪ್ರಕರಣಗಳನ್ನು ಇತ್ಯರ್ಥ ಪಡಿಸಿರುವುದಾಗಿ ಸಚಿವ ಕೃಷ್ಣ ಭೈರೇಗೌಡ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.
ಇಂದು ಸಮಾವೇಶಕ್ಕೂ ಮುನ್ನ ಸಚಿವ ಕೃಷ್ಣಭೈರೇಗೌಡ ಫಲಾನುಭವಿಗಳ ಜೊತೆ ಸಮಾಲೋಚನೆ ನಡೆಸಿದರು. ಕಂದಾಯ ಇಲಾಖೆಯ ಅಧಿಕಾರಿಗಳು ಯಾವ ರೀತಿ ಸ್ಪಂದಿಸಿದರು. ಸರ್ಕಾರದ ಆಶಯದಂತೆ ಸುಲಭ ಹಾಗೂ ಸರಳವಾಗಿ ದಾಖಲಾತಿಗಳನ್ನು ಮಾಡಲಾಯಿತೇ? ಯಾರಾದರೂ ಹಣ ಕೇಳಿದರೇ? ಅಥವಾ ಅನಗತ್ಯವಾಗಿ ಅಲೆದಾಡಿಸಲಾಯಿತೇ? ಎಂಬೆಲ್ಲಾ ವಿವರಗಳನ್ನುಪಡೆದುಕೊಂಡರು. ಫಲಾನುಭವಿಗಳು ಸಚಿವರ ಜೊತೆ ಸಕಾರಾತಕ ಮಾಹಿತಿಗಳನ್ನು ಹಂಚಿಕೊಂಡರು.




