Mysore
23
overcast clouds
Light
Dark

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ, ಮಂತ್ರಿ ಸ್ಥಾನ ಬಿಡಲು ಸಿದ್ಧ ; ಸಚಿವ ಕೆ.ಎನ್‌ ರಾಜಣ್ಣ

ಬೆಂಗಳೂರು: ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ, ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲು ಸಿದ್ಧನಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ಇಂದು(ಮೇ.೨೫) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಅಧ್ಯಕ್ಷರ ಬದಲಾವಣೆ ಸನ್ನೀವೇಶ ಎದುರಾದರೆ ನಾನು ಸಿದ್ದ. ಜೊತೆಗೆ ಮುಂದೆ ಯಾವುದೇ ಚುನಾವಣೆಗೆ ನಿಲ್ಲುವುದಿಲ್ಲ. ಪಕ್ಷಕ್ಕಾಗಿ ತನು, ಮನ ಅರ್ಪಿಸುತ್ತೇನೆ ಎಂದರು.

ವಿಧಾನಪರಿಷತ್ ಚುನಾವಣೆಯಲ್ಲಿ ಅವಕಾಶ ವಂಚಿತರಿಗೆ ಟಿಕೆಟ್‌ ಕೊಡಬೇಕು. ಯಾರಿಗೆ ನೇರವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಅಥವಾ ಈವರೆಗೂ ವಿಧಾನಪರಿಷತ್, ವಿಧಾನಸಭೆಯಲ್ಲಿ ಪ್ರಾತಿನಿಧ್ಯ ದೊರೆಯದೆ ಇರುವ ತಳ ಸಮುದಾಯದವರಿಗೆ ಅವಕಾಶ ನೀಡಬೇಕು. ನನ್ನ ಕಡೆಯಿಂದ ಯಾವ ಅಭ್ಯರ್ಥಿಯೂ ಇಲ್ಲ ಎಂದು ಪ್ರತಿಪಾದಿಸಿದರು.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಹಾಗೂ ಇತರೆ ಎಲ್ಲ ಕಡೆಯು ಧ್ರುವೀಕರಣ ಆಗಬಹುದು ಎಂದು ಸಚಿವರು ತಿಳಿಸಿದ್ದಾರೆ.

ಈ ವೇಳೆ ಡ್ರಗ್ಸ್‌ ಕುರಿತು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಡ್ರಗ್ಸ್‌ ಮಾಫಿಯಾ ಹೆಚ್ಚುತ್ತಲೇ ಇದೆ. ಮಾದಕ ವಸ್ತುಗಳ ಪಿಡುಗನ್ನು ತಪ್ಪಿಸಲು ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಮತ್ತಷ್ಟು ಕ್ರಮಗಳು ಅಗತ್ಯ ಎಂದು ಹೇಳಿದರು.