ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಸ್ವಾಭಿಮಾನಿ ಸಮಾವೇಶ ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಜನಕಲ್ಯಾಣ ಸಮಾವೇಶ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವೆ ಅದೇನು ‘ಒಪ್ಪಂದ’ ಆಗಿದೆಯೋ, ಆ ‘ಒಪ್ಪಂದ’ ಕಾರ್ಯಗತ ಆಗೋಲ್ಲ ಅನ್ನೋ ಅನುಮಾನ ಡಿ.ಕೆ.ಶಿವಕುಮಾರ್ ಅವರಿಗೆ ಯಾಕೆ ಕಾಡುತ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಶೀಘ್ರದಲ್ಲೇ ದೊಡ್ಡ ರಾಜಕೀಯ ಸ್ಫೋಟವಾಗುವ ಎಲ್ಲ ಲಕ್ಷಣಗಳಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಟೀಕಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ತಾವು ಚೆಸ್ ಆದರೂ ಆಡಿ, ಫುಟ್ಬಾಲ್ ಆದರೂ ಆಡಿ, ಆದರೆ ನಿಮ್ಮ ರಾಜಕೀಯ ಮೇಲಾಟದಲ್ಲಿ ಕನ್ನಡಿಗರ ಬದುಕಿನ ಜೊತೆ ಮಾತ್ರ ಚೆಲ್ಲಾಟವಾಡಬೇಡಿ. ತಮ್ಮ loyalty ಗೆ ತಮ್ಮ ಹೈಕಮಾಂಡ್ royalty ಕೊಡುತ್ತೋ ಬಿಡುತ್ತೋ ಅದು ನಿಮ್ಮ ಪಕ್ಷದ ಆಂತರಿಕ ವಿಚಾರ, ಆದರೆ ಕಾಂಗ್ರೆಸ್ ಪಕ್ಷಕ್ಕೆ loyal ಆಗಿ ಮತ ನೀಡಿ ಅಧಿಕಾರ ಕೊಟ್ಟಿರುವ ಕರ್ನಾಟಕದ ಮಾತಾದರರಿಗೆ ಅಭಿವೃದ್ಧಿಯ royalty ಕೊಟ್ಟು ಕನ್ನಡಿಗರ ಋಣ ತೀರಿಸಿ ಎಂದು ಹೇಳಿದ್ದಾರೆ.
ನೀವು ವ್ಯಕ್ತಿ ಪೂಜೆ ಆದರೂ ಮಾಡಿ, ಪಕ್ಷ ಪೂಜೆ ಆದರೂ ಮಾಡಿ, ಆದರೆ ಕಾಂಗ್ರೆಸ್ ಪಕ್ಷವನ್ನು ನಂಬಿ ಅಧಿಕಾರ ಕೊಟ್ಟಿರುವ ಮತದಾರ ಪ್ರಭುಗಳಿಗೆ ದ್ರೋಹ ಬಗೆಯಬೇಡಿ ಎಂದು ಪೋಸ್ಟ್ ಮಾಡಿದ್ದಾರೆ.





