ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ 545 ಪಿಎಸ್ಐ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರನ್ನು ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ 545 ಪಿಎಸ್ಐ ನೇಮಕಾತಿ ಹಗರಣದಲ್ಲಿ ಮಾಗಡಿ ಮೂಲದವರು ಅತಿ ಹೆಚ್ಚಾಗಿ ಹಾಗೂ ಸಂಬಂಧಿಕರು ಆಯ್ಕೆಯಾಗಿದ್ದರು. ಈ ಹಿನ್ನೆಲೆ ಅಶ್ವಥ್ ನಾರಾಯಣ ಪ್ರಭಾವದಿಂದ ಪ್ರಕರಣಕ್ಕೆ ಸಂಬಂಧಿಸಿದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂಬ ಆರೋಪವಿತ್ತು.
ಈ ಆರೋಪದ ಅನ್ವಯ ಕಾಂಗ್ರೆಸ್ ಸರ್ಕಾರ ಪಿಎಸ್ಐ ಹಗರಣದ ಮರು ತನಿಖೆಗೆ ಎಸ್ಐಟಿ ಅಧಿಕಾರಿಗಳಿಗೆ ಆದೇಶ ನೀಡಿದರು. ಹೀಗಾಗಿ ಎಸ್ಐಟಿ ಅಧಿಕಾರಿಗಳು, ಅಶ್ವಥ್ ನಾರಾಯಣ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಇನ್ನೂ ಈ ಸಂಬಂಧ ವಿಚಾರಣೆಗೆ ಹಾಜರಾದ ಅಶ್ವಥ್ ನಾರಾಯಣ ಅವರು, ನನಗೂ ಪಿಎಸ್ಐ ಅಕ್ರಮದ ಅಭ್ಯರ್ಥಿಗಳಿಗೂ ಯಾವುದೇ ಸಂಬಂಧವಿಲ್ಲ. ನನಗೂ ಈ ಪ್ರಕರಣಕ್ಕೂ ಯಾವುದೇ ನಂಟಿಲ್ಲ. ನನಗೆ ತಪ್ಪಿಸ್ಥ ಅಭ್ಯರ್ಥಿಗಳು ಪರಿಚಯವಿಲ್ಲ. ಇದೊಂದು ರಾಜಕೀಯ ಪ್ರೇರಿತ, ನಾನು ಯಾರಿಗೂ ಶಿಫಾರಸ್ಸು ಮಾಡಿಲ್ಲ ಎಂದು ಹೇಳಿದರು.