ಬೆಂಗಳೂರು: ನಗರದ ಸಂಚಾರದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಮೆಟ್ರೋ ಹಂತ-3ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಂಕು ಸ್ಥಾಪನೆಯನ್ನು ನೆರವೇರಿಸಿದರು.
ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಟ್ರೋ ಹಂತ-3ಕ್ಕೆ ಮೋದಿಯವರು ಶಂಕುಸ್ಥಾಪನೆಯನ್ನು ನೆರವೇರಿಸಿದ್ದು, ಇದು 2028ಕ್ಕೆ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ.
ಸುಮಾರು 44.65 ಕಿ.ಮೀ. ದೂರದ ಅಂದಾಜು 15,615 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 2 ಕಾರಿಡಾರ್ನಲ್ಲಿ ಕಾಮಗಾರಿ ನಡೆಯಲಿದೆ. ಮೊದಲ ಕಾರಿಡಾರ್ ಜೆ.ಪಿ.ನಗರ 4ನೇ ಹಂತ ಕೆಂಪಾಪುರದಿಂದ 21 ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸಿದರೆ, 2ನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಗೆ 9 ನಿಲ್ದಾಣಗಳನ್ನು ಒಳಗೊಳ್ಳಲಿದೆ.
ಕೆಲ ತಿಂಗಳ ಹಿಂದೆ ಈ 2 ಕಾರಿಡಾರ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಬಿಎಂಆರ್ಸಿಎಲ್ ಪ್ರಾರಂಭಿಸಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳ್ಳುವ ಸಂಭವವಿದೆ.
ಒಂದನೇ ಕಾರಿಡಾರ್ ಮೂರು ಪ್ಯಾಕೇಜ್ಗಳಲ್ಲಿ, 2ನೇ ಕಾರಿಡಾರ್ 4 ಪ್ಯಾಕೇಜ್ಗಳಲ್ಲಿ ನಡೆಯಲಿದೆ. ಮೊದಲ ಪ್ಯಾಕೇಜ್ ಜೆ.ಪಿ.ನಗರ 4ನೇ ಹಂತದಿಂದ ಮೈಸೂರು ರಸ್ತೆಯ ಸರ್ವೇಯನ್ನು ಮುಗಿಸಿ ಅಂತಿಮ ಸೂಚನೆಯನ್ನು ಹೊರಡಿಸಲಾಗಿದೆ.
ಕಂಠೀರವ ಸ್ಟೇಡಿಯಂನಿಂದ ಕೆಂಪಾಪುರದವರೆಗಿನ ಮೂರನೇ ಪ್ಯಾಕೇಜ್ನಲ್ಲಿ 100 ಆಸ್ತಿಗಳನ್ನು ಗುರುತಿಸಲಾಗಿದೆ. ಮೈಸೂರು ರಸ್ತೆ-ಕಂಠೀರವ ಸ್ಟೇಡಿಯಂವರೆಗೆ 2ನೇ ಪ್ಯಾಕೇಜ್ ಸರ್ವೇ ನಡೆಯಲಿದೆ.
ಮೂರು ತಿಂಗಳಲ್ಲಿ ಇದನ್ನು ಪೂರ್ಣಗೊಳಿಸುವಂತೆ ಬಿಎಂಆರ್ಸಿಎಲ್ ಸೂಚಿಸಿದೆ. ಕಾರಿಡಾರ್-2ಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಯುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.





