Mysore
21
overcast clouds
Light
Dark

ಪ್ರಜ್ವಲ್‌ ರೇವಣ್ಣ ಪ್ರಕರಣ: ಕಾರು ಚಾಲಕ ನಾಪತ್ತೆ!

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೊಗಳ ಕುರಿತು ತನಿಖೆ ಆರಂಭವಾಗಿದ್ದು, ಇದೀಗ ಪೆನ್‌ಡ್ರೈವ್ ಕುರಿತು ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.

ನಿನ್ನೆಯಷ್ಟೇ ಹಾಸನ ಜಿಲ್ಲೆಯ ಬಿಜೆಪಿ ಮುಖಂಡ ದೇವರಾಜೇಗೌಡ ಪೆನ್‌ಡ್ರೈವ್‌ನಲ್ಲಿದ್ದ ವಿವರಗಳನ್ನು ಬಹಿರಂಗಪಡಿಸಿರುವುದು ರೇವಣ್ಣ ಕುಟುಂಬದ ಮಾಜಿ ಕಾರು ಚಾಲಕ ಕಾರ್ತಿಕ್.‌ ಪೆನ್‌ಡ್ರೈವ್ ಹಂಚಿಕೆ ಹಿಂದೆ ಯಾರಿದ್ದಾರೆ ಎಂಬ ಎಲ್ಲಾ ದಾಖಲೆಗಳನ್ನು ಎಸ್‌ಐಟಿ ಮುಂದಿಡುವೆ ಎಂದಿದ್ದರು.

ಈ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕಾರ್ತಿಕ್‌ ನಾನು ಬಿಜೆಪಿ ಮುಖಂಡ ದೇವರಾಜೇಗೌಡ ಬಿಟ್ಟರೆ ಬೇರೆ ಯಾರಿಗೂ ವಿಡಿಯೊ ಹಾಗೂ ಫೋಟೊಗಳನ್ನು ಹಂಚಿಕೊಂಡಿಲ್ಲ ಎಂದು ಹೇಳಿದ್ದರು. ಹೀಗಾಗಿ ಕಾರ್ತಿಕ್‌ಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೊಟೀಸ್‌ ನೀಡಿತ್ತು. ಆದರೆ ಇದೀಗ ಕಾರ್ತಿಕ್‌ ನಾಪತ್ತೆಯಾಗಿದ್ದಾನೆ.

ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ನಿವಾಸಿ ಕಾರ್ತಿಕ್‌ 13 ವರ್ಷಗಳ ಕಾಲ ಕಾರು ಚಾಲಕನಾಗಿ ಪ್ರಜ್ವಲ್‌ ರೇವಣ್ಣ ಬಳಿ ಕೆಲಸ ನಿರ್ವಹಿಸಿದ್ದ. ಕಾರ್ತಿಕ್‌ ನಾಪತ್ತೆಯಾಗಿರುವುದರ ಬಗ್ಗೆ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಇದರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದಿದ್ದಾರೆ ಅಲ್ಲದೇ ಆತ ಮಲೇಷ್ಯಾಗೆ ಹೋಗಿದ್ದಾನೆ ಎಂದೂ ಸಹ ಹೇಳಿದ್ದಾರೆ.