Mysore
21
overcast clouds

Social Media

ಭಾನುವಾರ, 14 ಜೂನ್ 2026
Light
Dark

ನಮ್ಮ ಅಭಿವೃದ್ಧಿ ಕಾರ್ಯ ಸಹಿಸಲಾಗದೆ ಮೋದಿ ಕಿಡಿಗೇಡಿ ಮಾತುಗಳನ್ನಾಡುತ್ತಿದ್ದಾರೆ : ಕೃಷ್ಣಬೈರೇಗೌಡ

ಬಾಗಲಕೋಟೆ : ಬಿಜೆಪಿಯವರು ಆಪರೇಷನ್ ಮಾಡ್ತಾರೋ? ಇನ್ನೊಂದು ಮಾಡ್ತಾರೋ? ಮಾಡಲಿ. ಆದರೆ ಬಿಜೆಪಿ ಆಪರೇಷನ್ ಎದುರಿಸುವ ಶಕ್ತಿ ನಮ್ಮ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.

ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿ ಇರುತ್ತಾರೆ ಗೊತ್ತಿಲ್ಲ. ಸಿಎಂ, ಡಿಸಿಎಂ ಸೇರಿ ರಾಜ್ಯ ಲೂಟಿ ಮಾಡ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಯಾವ ಪ್ರಯತ್ನವೂ ಈಡೇರುವುದಿಲ್ಲ. ನಮ್ಮಲ್ಲಿ ಸಹಮತವಿದೆ, ನಾವೆಲ್ಲರೂ ಒಂದಾಗಿದ್ದೇವೆ. ಇವತ್ತು ಮುಖ್ಯವಾಗಿ ಆಗಬೇಕಾಗಿರೋದು ಜನಗಳ ಕಾರ್ಯ. ನಾವು ಜನಗಳ ಕೆಲಸದ ಬಗ್ಗೆ ಗಮನ ಹರಿಸಿದ್ದೇವೆ. ಬಿಜೆಪಿ ಆಪರೇಷನ್ ಎದುರಿಸುವ ಶಕ್ತಿ ನಮ್ಮ ಪಕ್ಷಕ್ಕಿದೆ. ರಾಜ್ಯದ ಜನರ ಆಶೀರ್ವಾದ ನಮಗಿದೆ. ಜನರ ಕೆಲಸ ಕಾರ್ಯ ನಾವು ಮಾಡಬೇಕು. ಪ್ರಧಾನಿ ಮೋದಿಯವರು ಏನಾದ್ರೂ ಹೇಳಲಿ, ನಾವು ನಮ್ಮ ಜನರ ಕೆಲಸ ನಾವು ಮಾಡ್ತೇವೆ ಎಂದಿದ್ದಾರೆ.

ಬಿಜೆಪಿಯವರು ಅಂಬಾನಿ, ಅದಾನಿ ಅಂತವರಿಗೆ ಅನುಕೂಲ ಮಾಡಿದ್ದಾರೆ. ನಾವು ನಮ್ಮ ರಾಜ್ಯದ ಸಾಮಾನ್ಯ ಜನ ಅಂಬಣ್ಣ, ತಿಮ್ಮಣ್ಣನಿಗೆ ಗ್ಯಾರಂಟಿ ಕೊಟ್ಟು ಸಹಾಯ ಮಾಡಿದ್ದೀವಿ. ನಮ್ಮ ಅಭಿವೃದ್ಧಿ ಕಾರ್ಯ ಸಹಿಸಲಿಕ್ಕೆ ಆಗದೆ ಮೋದಿ ಕಿಡಿಗೇಡಿ ಮಾತುಗಳನ್ನು ಆಡ್ತಿದ್ದಾರೆ. ನಾವು ಧೃತಿಗೆಡುವುದಿಲ್ಲ. ನಮ್ಮ ಲಕ್ಷ್ಯ ಬೇರೆ ಕಡೆ ಹೋಗುವುದಿಲ್ಲ. ದುಡಿಯುವ ವರ್ಗದ ಜನರ ಪರವಾಗಿ ಕೆಲಸ ಮಾಡೋದು ನಮ್ಮ ಕೆಲಸ. ನಮ್ಮ ಸರ್ಕಾರದ ಬಡಜನರ ಪರ ಕಾರ್ಯ ಸಹಿಸದೆ ಸರ್ಕಾರ ಕಿತ್ತು ಹಾಕುವ ಪ್ರಯತ್ನವನ್ನು ಬಿಜೆಪಿ ಮಾಡ್ತಿದೆ. ಬಡವರ ಆಶೀರ್ವಾದ ನಮ್ಮನ್ನ ಕೈ ಹಿಡಿಯುತ್ತೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ರಾಜ್ಯ-ಕೇಂದ್ರ ಸರ್ಕಾರಗಳ ಸಂಘರ್ಷದಲ್ಲಿ ಜನತೆಗೆ ಅನ್ಯಾಯ ಆಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಸಂಘರ್ಷ ಮಾಡುವಂತಹ ಉದ್ದೇಶ ನಮಗಿಲ್ಲ. ಜನರಿಗೆ ಬರಬೇಕಾದ ಹಣವನ್ನು ಸಂವಿಧಾನ ಬದ್ಧವಾಗಿ ಕೇಳಿದ್ದೇವೆ. ಸೆಪ್ಟೆಂಬರ್ 23ರಿಂದ ಇಲ್ಲಿಯವರೆಗೆ 8 ಪತ್ರಗಳನ್ನು ಬರೆದಿದ್ದೇವೆ. ಕರ್ನಾಟಕ ಜನಗಳ ಹಕ್ಕನ್ನು ನಾವು ಒತ್ತಾಯ ಮಾಡ್ತಿದ್ದೇವೆ ಎಂದು ಹೇಳಿದ್ದಾರೆ.

ಕೇಂದ್ರಕ್ಕೆ ರಾಜ್ಯ ಸರ್ಕಾರ ಬರ ಅಧ್ಯಯನ ವರದಿ ಸಲ್ಲಿಸಿಲ್ಲ ಎಂಬ ಕಟೀಲ್ ಹೇಳಿಕೆ ಕುರಿತು ಮಾತನಾಡಿದ ಅವರು, ಬಾಯಿಗೆ ಬಂದ ಹಾಗೆ ಮಾತಾಡ್ತಾರೆ ಎಂದು ಅದಕ್ಕೆಲ್ಲಾ ಉತ್ತರ ಕೊಡೋಕೆ ಆಗುತ್ತಾ? ನಾವು ಮೆಮೊರಾಂಡಮ್ ಸಲ್ಲಿಸಿದ್ದೇವೆ. ಬಿಜೆಪಿಗರಿಗೆ ಸಾಸಿವೆ ಕಾಳಿನಷ್ಟು ಕಾಳಜಿ ಇದ್ದರೆ, ಕೇಂದ್ರ ಸರ್ಕಾರದಿಂದ ಕರ್ನಾಟಕ ರೈತರಿಗೆ ಬರಬೇಕಾದ ಹಣವನ್ನು‌ ಮೊದಲು ಬಿಡುಗಡೆ ಮಾಡಿಸಲಿ ಎಂದು ತಿರುಗೇಟು ನೀಡಿದ್ದಾರೆ.

ನಾವು ಒಟ್ಟು 223 ತಾಲೂಕುಗಳಲ್ಲಿ ಬರ ಘೋಷಣೆ ಮಾಡಿದ್ದೀವಿ. ದೇಶದಲ್ಲಿ ಹತ್ತು ಹನ್ನೆರಡು ರಾಜ್ಯಗಳಲ್ಲಿ ಬರ ಇದ್ದರೂ ಕೂಡ ಕರ್ನಾಟಕದಲ್ಲಿ ಮಾತ್ರ ಬರ ಘೋಷಣೆ ಮಾಡಿ, ಬೆಳೆ ನಷ್ಟದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಅಂದಾಜು 17.5 ಸಾವಿರ ಕೋಟಿ ಪರಿಹಾರ ಕೇಳಿದ್ದೇವೆ‌. ಕೇಂದ್ರದ ಗೃಹ, ಕೃಷಿ ಸಚಿವರುಗಳು ಭೇಟಿಗೆ ಅವಕಾಶ ಕೊಟ್ಟಿಲ್ಲ. ರಾಜ್ಯದಿಂದ 26 ಸಂಸದರಿದ್ದಾರೆ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ದೆಹಲಿಯಲ್ಲಿ ಕರ್ನಾಟಕದ ಸಚಿವರಿದ್ದಾರೆ. ರಾಜ್ಯದ ರೈತರಿಗೆ ಬರಬೇಕಾದ ಹಣವನ್ನು ಬಿಡುಗಡೆ ಮಾಡುವ ಪ್ರಯತ್ನ ಮಾಡಲಿ. ಪಕ್ಷಾತೀತವಾಗಿ ನಾವು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!