ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಕೇಂದ್ರ ವಿದೇಶಾಂಗ ಸಚಿವಾಲಯ ಬಿಗ್ ಶಾಕ್ ನೀಡಿದೆ.
ಕೇಂದ್ರ ವಿದೇಶಾಂಗ ಸಚಿವಾಲಯ ಇದೇ ಮೊದಲ ಬಾರಿಗೆ ವಿದೇಶದಲ್ಲಿರುವ ಪ್ರಜ್ವಲ್ಗೆ ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಕಾರಣ ಕೇಳಿ ಇಂದು (ಮೇ.24) ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ಪೊರ್ಟ್ ಮತ್ತು ವೀಸಾ ಎರಡನ್ನೂ ರದ್ದುಪಡಿಸಬೇಕೆಂದು ಸಿಎಂ ಸಿದ್ದರಾಮಯ್ಯ ಎರಡು ಬಾರಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ವಿದೇಶಾಂಗ ವ್ಯವಹಾರಗಳ ಇಲಾಖೆ ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ನೀಡಿ, ಹತ್ತು ದಿನಗಳೊಳಗೆ ನೀವು ಶೋಕಾಸ್ ನೋಟಿಸ್ಗೆ ಉತ್ತರ ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.
ನೀವು ಶೋಕಾಸ್ ನೋಟಿಸ್ಗೆ ಸರಿಯಾದ ಉತ್ತರ ಕೊಡದಿದ್ದರೆ ನಿಮ್ಮ ಪ್ರಯಾಣದ ಮೇಲೆ ನಿರ್ಬಂಧ ಹಾಕಬೇಕಾಗುತ್ತದೆ. ಮುಂದಿನ ಕಾನೂನಿನ ಬಿಕ್ಕಟ್ಟುಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಸೂಚನೆ ಕೊಡಲಾಗಿದೆ. ಇದರಿಂದ ವಿದೇಶದಲ್ಲಿರುವ ಪ್ರಜ್ವಲ್ಗೆ ಮತ್ತಷ್ಟು ಸಂಕಷ್ಟ ಎದುರಾದಂತಗಿದೆ.
ವಿದೇಶಾಂಗ ವ್ಯವಹಾರಗಳ ಪಾಸ್ಪೋರ್ಟ್ ರದ್ದುಗೊಂಡರೆ ವಿಧಿ ಇಲ್ಲದೆ ಪ್ರಜ್ವಲ್ ಶರಣಾಗಬೇಕು ಇಲ್ಲವೇ ತನಿಖಾ ಸಂಸ್ಥೆಗಳ ಮೂಲಕ ಬಂಧನಕ್ಕೊಳಗಾಗಬೇಕಿದೆ.
ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಈಗಾಗಲೇ ಪ್ರಜ್ವಲ್ಗೆ ಮೂರು ಬಾರಿ ನೋಟಿಸ್ ಜಾರಿ ಮಾಡಿತ್ತು. ಜರ್ಮನಿಯಿಂದ ಬೆಂಗಳೂರಿಗೆ ಬರಲು ಮೂರು ಬಾರಿ ವಿಮಾನ ಟಿಕೆಟ್ ಬುಕ್ ಮಾಡಿ ಕೊನೆಕ್ಷಣದಲ್ಲಿ ಪ್ರಯಾಣ ರದ್ದುಪಡಿಸಿ ಎಸ್ಐಟಿಗೆ ತಲೆನೋವು ತಂದಿದ್ದರು. ಇದೀಗ ತನಿಖೆಗೆ ಗೈರು ಹಾಜರಾದ ಹಿನ್ನಲೆಯಲ್ಲಿ ಕಾನೂನು ಕ್ರಮದ ಮೂಲಕವೇ ಕ್ರಮ ಕೈಗೊಳ್ಳಲು ಎಸ್ಐಟಿ ಮುಂದಾಗಿದೆ.