ಬೆಂಗಳೂರು : ರಾಜ್ಯಕ್ಕೆ ಕಳೆದ ಒಂದು ತಿಂಗಳಿಂದ ವೈರಸ್ ಗಳ ಕಾಟ ಶುರುವಾಗಿದ್ದು, ಒಂದು ಕಡೆ ಡೆಂಗ್ಯೂ ಜನರನ್ನ ಬಿಟ್ಟು ಬಿಡದೆ ಕಾಡುತ್ತಿದ್ರೆ, ಮತ್ತೊಂದು ಕಡೆ ನಿಫಾ ವೈರಸ್ ಆತಂಕ ಶುರುವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ನಿಫಾ ವೈರಸ್ ಆತಂಕ ಎದುರಾಗಿದೆ. ಈಗಾಗಲೇ ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಗೆ ೧೪ ವರ್ಷದ ಬಾಲಕ ಸಾವನ್ನಪ್ಪಿದ ಬೆನ್ನಲ್ಲೆ ರಾಜ್ಯದ ಕೇರಳ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಬಾವಲಿ ಮತ್ತು ಹಂದಿಗಳ ಮೈಯ ದ್ರವದ ಮೂಲಕ ಮನುಷ್ಯರಿಗೆ ಹರಡುವ ವೈರಸ್ ಇದಾಗಿದ್ದು, ಇದು ಮನುಷ್ಯರಿಂದ ಮನುಷ್ಯರಿಗೂ ಹರಡುತ್ತದೆ. ಕೋವಿಡ್ ಸೋಂಕಿನಂತೆ ಈ ನಿಫಾ ವೈರಸ್ ಸೋಂಕು ಗುಣಪಡಿಸಲು ಯಾವುದೇ ಚಿಕಿತ್ಸೆ ಇಲ್ಲ. ಮರಣ ಪ್ರಮಾಣ ಶೇ.೭೦ ರಷ್ಟಿದೆ. ಹೀಗಾಗಿ ಕೇರಳಕ್ಕೆ ಗಡಿ ಹಂಚಿಕೊಂಡಿರುವ ಕರ್ನಾಟಕ ಜಿಲ್ಲೆಗಳಲ್ಲೂ ಕೂಡ ಹೂ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ ಗಡಿಯಲ್ಲಿ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಾಗಿದೆ.