Mysore
34
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಹನಿಟ್ರ್ಯಾಪ್‌ ಕೇಸ್‌ ತನಿಖೆ ನಿಧಾನವಾಗುತ್ತಿದೆ, ಪಾರದರ್ಶಕವಾಗಿ ತನಿಖೆ ನಡೆಯಬೇಕು: ನಿಖಿಲ್‌ ಕುಮಾರ್‌ಸ್ವಾಮಿ

ಬೆಂಗಳೂರು: ರಾಜ್ಯ ಸರ್ಕಾರ ಹನಿಟ್ರ್ಯಾಪ್‌ ಕೇಸ್‌ ತನಿಖೆಯನ್ನು ನಿಧಾನಗತಿಯಲ್ಲಿ ನಡೆಸುತ್ತಿದ್ದು, ಪಾರದರ್ಶಕವಾಗಿ ತನಿಖೆ ನಡೆಸಿ ರಾಜ್ಯ ಜನತೆಯ ಮುಂದೆ ವರದಿಯನ್ನಿಡಬೇಕು ಎಂದು ಸರ್ಕಾರಕ್ಕೆ  ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ನಗರದ ಜೆಡಿಎಸ್‌ ಕಚೇರಿಯಲ್ಲಿ ಇಂದು(ಏಪ್ರಿಲ್‌.1) ಹನಿಟ್ರ್ಯಾಪ್‌ ವಿಚಾರ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಭಾವಿ ಸಚಿವರಿಗೆ ಹನಿಟ್ರ‍್ಯಾಪ್ ಆಗಿದೆ. ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಪಾರದರ್ಶಕವಾಗಿ ತನಿಖೆ ನಡೆಸಿ, ಸತ್ಯಾಸತ್ಯಾತೆಯ ಬಗ್ಗೆ ಜನತೆಯ ಮುಂದೆ ಅನಾವರಣಗೊಳಿಸಬೇಕು. ಆದರೆ ಸಚಿವರ ಸರ್ಕಾರವೇ ಅಧಿಕಾರದಲ್ಲಿದ್ದರೂ ತನಿಖೆಯನ್ನು ನಿಧಾನಗತಿಯಲ್ಲಿ ನಡೆಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ವಿರೋಧ ಪಕ್ಷದವರನ್ನು ಮುಗಿಸಲು ಯಾವ ಮಟ್ಟಕ್ಕೆ ಬೇಕಾದರೂ ಹೋಗಿ ಕೆಲಸ ಮಾಡುತ್ತದೆ. ಆದರೆ ಹನಿಟ್ರ್ಯಾಪ್‌ ಕೇಸ್‌ನಲ್ಲಿ ಮಾತ್ರ ಯಾಕೆ ತನಿಖೆಯನ್ನು ನಿಧಾನ ಗತಿಯಲ್ಲಿ ನಡೆಸುತ್ತಿದೆ? ಇದೇ ಸರ್ಕಾರ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಅವರ ಕೇಸ್‌ನಲ್ಲಿ ಅಷ್ಟೊಂದು ಆಸಕ್ತಿ ವಹಿಸಿ ಏನೇನೋ ಮಾಡಿದರು. ಅಷ್ಟೊಂದು ಹೈಡ್ರಾಮಾ ಮಾಡೋಕೆ ಅವರೇನೂ ಭಯೋತ್ಪಾದಕರಾ? ಒಬ್ಬ ಎಂಎಲ್‌ಸಿಯನ್ನು ಹಾಗೇ ನಡೆಸಿಕೊಂಡಿದ್ದು ಸರಿಯಲ್ಲ. ಸರ್ಕಾರವೂ ವಿಪಕ್ಷಗಳನ್ನು ಹಾಗೇ ನಡೆಸಿಕೊಂಡರೇ, ಸ್ವತಃ ಸಚಿವರೇ ಆರೋಪ ಮಾಡಿದರೂ ಯಾಕೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಎಂಎಲ್‌ಸಿ ಆರ್‌.ರಾಜೇಂದ್ರ ಅವರ ಕೊಲೆ ಯತ್ನದ ಸುಪಾರಿಯ ಬಗ್ಗೆ ಮಾತನಾಡಿದ ಅವರು, ಸರ್ಕಾರದ ಸಚಿವರೇ ಸದನದ ಒಳಗೆ ಹನಿಟ್ರ್ಯಾಪ್‌ ಬಗ್ಗೆ ಆರೋಪ ಮಾಡಿದ್ದರು. ಇದೀಗ ಅವರ ಮಗ ಕೊಲೆ ಕೇಸ್ ಬಗ್ಗೆ ಆರೋಪ ಮಾಡಿದ್ದಾರೆ. ಹಾಗಾಗಿ ಈ ಎಲ್ಲಾ ವಿಚಾರವನ್ನು ರಾಜ್ಯದ ಜನರಿಗೆ ಬಿಡುತ್ತೇನೆ. ಅವರೇ ಈ ವಿಚಾರಗಳ ಬಗ್ಗೆ ತೀರ್ಮಾನ ಮಾಡಲಿ ಎಂದರು.

ಇನ್ನು ಸಚಿವರು ಹನಿಟ್ರ್ಯಾಪ್‌ ವಿಚಾರದಲ್ಲಿ ಮೊದಲು ಸಿನಿಮಾ ಟೀಸರ್ ತೋರಿಸಿದರು. ಆದರೆ ಇದೀಗ ಒಳಗೆ ಸಿನಿಮಾ ಬೇರೆಯೇ ಆಗಿದೆ. ಅದೇನು ರಾಜ್ಯದ ಜನತೆಗೆ ಬಿಡುತ್ತೇನೆ. ಆದರೆ ಹನಿಟ್ರ್ಯಾಪ್‌ ವಿಚಾರ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ವಿಧಾನಸೌಧದಲ್ಲಿ ಈ ಬಗ್ಗೆ ಪ್ರಸ್ತಾಪ ಆಗುವುದು ಅತ್ಯಂತ ಮಾರಕವಾದ ಸಂಗತಿಯಾಗಿದೆ. ಅಲ್ಲದೇ ಯಾವುದೋ ಸ್ಥಾನದ ಮೇಲೆ ಅಪೇಕ್ಷೆ ಇಟ್ಟವರು ಹೀಗೆ ಅಡ್ಡದಾರಿ ಹಿಡಿದಿದ್ದಾರೆ. ಹೀಗಾಗಿ ವಾಮಮಾರ್ಗದಲ್ಲಿ ತೇಜೋವಧೆ ಮಾಡೋದು ಸರಿಯಲ್ಲ, ಇದು ಸಮಾಜಕ್ಕೆ ಮಾರಕವಾಗಿದೆ ಎಂದು ಹೇಳಿದರು.

Tags:
error: Content is protected !!