Mysore
25
overcast clouds

Social Media

ಬುಧವಾರ, 20 ಮೇ 2026
Light
Dark

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಹೈಕಮಾಂಡ್ ನೀವೆ ಮುಖ್ಯಮಂತ್ರಿ ಎಂದರೆ ನಾನು ರೆಡಿ ಎಂದು ಮೈಸೂರಿನಲ್ಲಿ ನೀಡಿದ್ದ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟ ಪಡಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಸ್ಪಷ್ಟ ಮಾಹಿತಿ ನೀಡಿರುವ ಅವರು, ಮೈಸೂರಿನಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸುವಾಗ ನಾನು ನೀಡಿರುವ ಹೇಳಿಕೆಯು ತಪ್ಪಾಗಿ ಅರ್ಥೈಸಿ ವರದಿಯಾಗುತ್ತಿರುವುದು ಈಗಷ್ಟೇ ನನ್ನ ಗಮನಕ್ಕೆ ಬಂದಿರುವ ಕಾರಣ ಗೊಂದಲ ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದಿದ್ದಾರೆ.

ವರದಿಗಾರರು ಸಿಎಂ ಹೇಳಿದ್ದು ಸ್ವಂತ ಹೇಳಿಕೆನಾ? ಏನು? ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನಾನು, ಅದು ಸಿಎಂ ಅವರೇ ಹೇಳಿದಾರೆ. ನಾನೂ ಹೇಳಿದ್ದೀನಲ್ಲಾ ಸರ್, ನಾಲ್ಕು ಜನ ಕುಳಿತುಕೊಂಡು ಚರ್ಚೆ ಮಾಡಿದಾರೆ ದೆಹಲಿಯಲ್ಲಿ, ಆ ನಾಲ್ಕು ಜನ ಹೊರತುಪಡಿಸಿ ಬೇರೆ ಯಾರೇ ಮಾತಾಡಿದರೂ ಅದಕ್ಕೆ ಬೆಲೆಯಿಲ್ಲ. ಹೈಕಮಾಂಡ್ ಹೇಳಬೇಕಲ್ವಾ? ನಾಳೆ ಹೈಕಮಾಂಡ್ ನೀವೇ ಮುಖ್ಯಮಂತ್ರಿ ಅಂದ್ರೆ ನಾನು ಯೆಸ್ ಅಂತೀನಿ ಎಂದಿದ್ದೆ. ಅದಕ್ಕೆ ವರದಿಗಾರರೊಬ್ಬರು ಯು ಆರ್ ಆಲ್ಸೋ ರೆಡಿ ? ಎಂದು ಕೇಳಿದರು. ಯು ಆರ್ ಆಲ್ಸೋ ರೆಡಿ, ಇಫ್ ಯು ಆರ್ ರೆಡಿ, ಐ ಆಮ್ ಆಲ್ಸೋ ರೆಡಿ ಎಂದಿದ್ದೇನೆ.

ನಾಳೆ ಹೈಕಮಾಂಡ್ ನೀವೇ ಮುಖ್ಯಮಂತ್ರಿ ಎಂದು ಹೇಳಿದರೆ, ನಾನು ಕೂಡ ಯೆಸ್ ಅಂತೀನಿ ಎನ್ನುವುದರ ಅರ್ಥ, ಇಲ್ಲಿ ಹೈಕಮಾಂಡ್ ವರದಿಗಾರರನನ್ನೆ ಮುಖ್ಯಮಂತ್ರಿ ಎಂದು ಹೇಳಿದರೆ, ನನ್ನ ಅಭ್ಯಂತರ ಇಲ್ಲ. ಅದನ್ನು ಒಪ್ಪಿಕೊಳ್ಳುತ್ತೇನೆ ಎಂಬುದಾಗಿತ್ತು. ಈ ಮಾತು ಹೇಳುವಾಗ ನಾನು ವರದಿಗಾರರತ್ತ ಕೈ ಸನ್ನೆ ಮಾಡಿ, ಅವರ ಕೈ ಮುಟ್ಟಿ ಹೇಳಿದ್ದೇನೆ. ನಾನು ಎಲ್ಲಿಯೂ ನನಗೆ ಹೈಕಮಾಂಡ್ ಮುಖ್ಯಮಂತ್ರಿಯಾಗು ಎಂದು ಹೇಳಿದರೆ ನಾನು ಸಿದ್ದ ಎಂದು ಹೇಳಿದ್ದಲ್ಲ. ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟ ಪಡಿಸಿದ್ದಾರೆ. ನೀವೇ ಎಂಬುದು ಆ ವರದಿಗಾರನ ಕುರಿತಾಗಿ ಹೇಳಿದ್ದೇ ಹೊರತು ಪ್ರಿಯಾಂಕ್ ಖರ್ಗೆಯ ಕುರಿತಾಗಿ ಅಲ್ಲ ಎಂದು ಪುನರುಚ್ಚರಿಸಿದ್ದಾರೆ.

ನಾನು ನನಗೆ ನೀಡಿದ ಇಲಾಖೆಗಳ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ, ಶ್ರದ್ದಾಪೂರ್ವಕವಾಗಿ ನಿರ್ವಹಿಸುವುದರ ಬಗ್ಗೆ ಗಮನಿಸುತ್ತಿದ್ದೇನೆಯೇ ಹೊರತು ಇನ್ಯಾವುದೇ ಹುದ್ದೆಗಳ ಮೇಲೆ ನನ್ನ ಗಮನವಿಲ್ಲ, ಯೋಜನೆಗಳ ಮೂಲಕ ಜನರನ್ನು ತಲುಪುವುದು, ಜನರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನದ ಮೇಲೆ ಸದಾ ನನ್ನ ಗಮನವನ್ನು ಕೇಂದ್ರೀಕರಿಸಿರುತ್ತೇನೆ. ಯಾವುದೇ ಹುದ್ದೆಗಳನ್ನು ಜನರ ಅಪೇಕ್ಷೆ, ಆಶೀರ್ವಾದದಿಂದ ಪಡೆಯಬಹುದು ಹೊರತು ಲಾಭಿಯಿಂದ ಪಡೆಯಲಾಗದು, ನಮ್ಮ ರಾಜಕೀಯ ಬೆಳವಣಿಗೆ ಜನರ ನಂಬಿಕೆಯ ಮೇಲೆ ನಿಂತಿದೆ ಎಂದು ನಂಬಿಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಘಟನೆಯನ್ನು ತಪ್ಪಾಗಿ ಅರ್ಥೈಸಿ ವರದಿ ಮಾಡುತ್ತಿರುವುದು, ಸುದ್ದಿಯನ್ನು ಪರಿಶೀಲಿಸದೇ ತಿರುಚಿ ವರದಿ ಮಾಡುತ್ತಿರುವುದು. ಘಟನೆಯನ್ನು ಘಟನೆ ಎಂದು ವರದಿ ಮಾಡುವುದರ ಬದಲು, ನಾನು ಹೇಳಿಲ್ಲದ ಪದಗಳನ್ನೂ ಸೇರಿಸಿ ನಾಳೆ ನಾನೇ ಸಿಎಂ ಎಂಬ ಶೀರ್ಷಿಕೆಯಲ್ಲಾ ಸೇರಿಸಿ ವರದಿ ಮಾಡಲಾಗುತ್ತಿದೆ, ಇವೆಲ್ಲಾ ಕನ್ನಡ ಪತ್ರಿಕೋದ್ಯಮಕ್ಕೆ ಒಳ್ಳೆಯ ನಿದರ್ಶನವಲ್ಲಾ ಎಂಬುದು ನನ್ನ ನಂಬಿಕೆಯಾಗಿದೆ ಎಂದು ತಿಳಿಸಲು ಬಯಸುತ್ತೇನೆ ಎಂದು ಸಚಿವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!