ಮೈಸೂರು: ಮೈಸೂರು ನಗಾರಾಭಿವೃದ್ದಿ ಪ್ರಾಧಿಕಾರದ(ಮುಡಾ) ಪ್ರಕರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಇ.ಡಿ.ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಮುಡಾ ಪ್ರಕರಣದಲ್ಲಿ ಮೈಸೂರು ಲೋಕಾಯುಕ್ತ ದೂರಿನಲ್ಲಿ ಎ1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಇ.ಡಿ.ತನಿಖಾ ಸಂಸ್ಥೆಯೂ ವಿಚಾರಣೆಗೆ ಒಳಪಡಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೆಲವೇ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆಯಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
ಈಗಾಗಲೇ ಇ.ಡಿ.ಅಧಿಕಾರಿಗಳು ಮುಡಾ ಪ್ರಕರಣ ಸಂಬಂಧ ಮುಡಾ ಕಚೇರಿಯ ಮೇಲೆ ಎರಡೂ ದಿನಗಳ ಕಾಲ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದರು. ಆ ನಂತರ ಮುಡಾ ಮಾಜಿ ಆಯುಕ್ತರಾದ ಟಿ.ಬಿ.ನಟೇಶ್ ಕುಮಾರ್ ಹಾಗೂ ದಿನೇಶ್ ಕುಮಾರ್ ಅವರ ಮನೆ ಮೇಲೂ ದಾಳಿ ಮಾಡಿದ್ದರು. ಅಲ್ಲದೇ ಎ4 ಆರೋಪಿ ದೇವರಾಜು, ಸಿಎಂ ಸಿದ್ದರಾಮಯ್ಯ ಆಪ್ತರಾದ ಬಿ.ಕೆ.ಕುಮಾರ್ ಹಾಗೂ ಬಾಮೈದ ಎ3 ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸಹ ವಿಚಾರಣೆಗೊಳಪಡಿಸಿದ್ದರು. ಆದರೆ ಇದೀಗ ಇ.ಡಿ.ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.




