ಬೆಂಗಳೂರು: ರಾಜ್ಯದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್ಗೆ ತಿಳಿಸಿದರು.
ಸದಸ್ಯ ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದ್ವಿಚಕ್ರ ವಾಹನ, ಬಸ್, ಕಾರು, ಟ್ರ್ಯಾಕ್ಟರ್ ಮತ್ತಿತರ ವಾಹನಗಳ ಅಪಘಾತದಿಂದ ದೇಶಾದ್ಯಂತ 1,25,000 ಜನ ಸಾವನ್ನಪ್ಪಿದರೆ, ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಜನ ಸಾಯುತ್ತಾರೆ ಎಂದು ಹೇಳಿದರು.
ಅಪಘಾತಗಳ ಪ್ರಕರಣಗಳನ್ನು ತಡೆಗಟ್ಟಲು ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಟ್ಟುನಿಟ್ಟಿನ ದಂಡ ವಿಧಿಸುವುದು, ಡಿಎಲ್ ರದ್ದುಪಡಿಸುವುದು, ಕಾನೂನು ಕ್ರಮಗಳಂತಹ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರೂ ಅಪಘಾತಗಳು ಕಡಿಮೆಯಾಗುತ್ತಿಲ್ಲ ಎಂದು ವಿಷಾದಿಸಿದರು.
ಶಾಲಾ ಕಾಲೇಜುಗಳಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ, ಮದ್ಯಪಾನ ಮಾಡಿ ವಾಹನ ಚಾಲನೆ ನಿಷೇಧ, ವೀಲ್ಹಿಂಗ್ ಮಾಡಿದವರ ಡಿಎಲ್ ರದ್ದು ಸೇರಿದಂತೆ ಹತ್ತಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಎಷ್ಟೇ ಕಾನೂನು ಕ್ರಮ ವಿಧಿಸಿದರೂ ಜನರಲ್ಲಿ ಜಾಗೃತಿ ಬರದೆ ಇದ್ದರೆ ನಾವೇನು ಮಾಡಲು ಸಾಧ್ಯ? ಎಂದರು.





