ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳೋದು ಬೇಡ ಎಂಬುದು ಹೇಳಿಲೆ ಅಷ್ಟೇ ಎಚ್ಚರಿಕೆ ಅಲ್ಲ. ಎಚ್ಚರಿಕೆ ಗಿಚ್ಚರಿಕೆ ಎಲ್ಲಾ ನಡೆಯಲ್ಲ, ಎಚ್ಚರಿಕೆನಾ ಯಾರು ಕೇಳುತ್ತಾರೆ ಎಂದು ಸಚಿವ ಕೆ.ಎನ್.ರಾಜಣ್ಣ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಫೆಬ್ರವರಿ.17) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಅವರೇ ಎಐಸಿಸಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳದಿದ್ದರೆ ಸಾಕು. ಅವರು ಎಲ್ಲ ವಿಚಾರಕ್ಕೂ ಎಐಸಿಸಿ ಹೇಳಿದೆ ಎಂದು ಅದರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಬಾರದು. ನಾನೇನು ಅವರ ಬಗ್ಗೆ ಆರೋಪಿಸುತ್ತಿಲ್ಲ, ಇದು ವಾಸ್ತವ. ಅಲ್ಲದೇ ನಾನು ಯಾರಿಂದಲೂ ಶಿಸ್ತಿನ ಪಾಠ ಮಾಡಿಸಿಕೊಳ್ಳಬೇಕಿಲ್ಲ. ನಾನು ಪಕ್ಷದಲ್ಲಿ 50 ವರ್ಷಗಳ ಕೆಲಸ ಮಾಡಿದ್ದು, ನಾನು ಹೇಳಿಕೆಗಳನ್ನು ನೀಡಿದರೆ ಸತ್ಪರಿಣಾಮ ಬೀರುವ ಹೇಳಿಕೆಗಳನ್ನು ನೀಡುತ್ತೇನೆಯೇ ಹೊರತು, ದುಷ್ಪರಿಣಾಮ ನೀಡುವ ಹೇಳಿಕೆಗಳನ್ನು ನೀಡಲ್ಲ ಎಂದು ತಿರುಗೇಟು ನೀಡಿದ್ದಾರೆ.
ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ವೈಯುಕ್ತಿಕವಾಗಿ ಏನೂ ಇಲ್ಲ, ವಿಚಾರ ಬೇರೆ ಇರಬಹುದು ಅಷ್ಟೇ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ ಅವರು ಮತ್ತೊಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರಾಗಿದ್ದು, ಜೊತೆಯಲ್ಲಿಯೇ ವಿದೇಶ ಪ್ರವಾಸ ಮಾಡಿದ್ದೇವೆ. ನಾನು ಅವರನ್ನು ನಮ್ಮ ನಿವಾಸಕ್ಕೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಎಚ್ಚರಿಕೆ ವಿಚಾರವಾಗಿ ಮಾತನಾಡಿದ ಅವರು, ನಮಗೆ ಎಚ್ಚರಿಕೆ ನೀಡಲು ಜಿ.ಸಿ.ಚಂದ್ರಶೇಖರ್ ಯಾರು? ಕೆಪಿಸಿಸಿ ಕಾರ್ಯಾಧ್ಯಕ್ಷರಾದರೆ ಅವರಿಗೇನು ಎರಡು ಕೊಂಬು ಇದೆಯಾ? ಶಿಶುಪಾಲ ಕೃಷ್ಣ ಪುರಾಣ ಇದೆಲ್ಲಾ ನಾನು ನಂಬಲ್ಲ. ಪುರಾಣ ಎಲ್ಲಾ ಕಟ್ಟು ಕಥೆ ಅವರೇ ಶಿಶುಪಾಲ. ಇಂತಹವರು ಪಕ್ಷಕ್ಕೆ ಹೊರೆ, ಅವರ ಹಿನ್ನಲೆ ಏನೆಂದು ಪ್ರಶ್ನಿಸಿದ್ದಾರೆ.
ಸಿಎಂ ಪೂರ್ಣಾವಧಿಯ ಕುರಿತು ಪ್ರತಿಕಿಯೆ ನೀಡಿದ ಅವರು, ನಾನೇನು ಪೂರ್ಣಾವಧಿ ಸಿಎಂ ವಿಚಾರದಲ್ಲಿ ಹಟಕ್ಕೆ ಬಿದ್ದಿಲ್ಲ. ನಮ್ಮ ಪಕ್ಷದಲ್ಲಿ ಏನೇ ವಿಚಾರವಿದ್ದರೂ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಹೈಕಮಾಂಡ್ ತಿಳಿಸಿರುವಂತೆ ಲೋಕಸಭೆ ಚುನಾವಣೆಯವರೆಗೂ ಮಾತ್ರ ಅಧ್ಯಕ್ಷ ಅನ್ನೋ ಕಾರಣಕ್ಕೆ ಕೇಳಿದ್ದೇವೆ. ಡಿಸಿಎಂ ಸ್ಥಾನ ಹೆಚ್ಚುವರಿ ನೀಡಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯವಾಗುತ್ತಿತ್ತು. ಆದರೆ ಈಗ ಕೇಳಲ್ಲ, ಡಿಸಿಎಂ ಸ್ಥಾನ ಅಂದೆ ಏನು ತಲೆ ಮೇಲೆ ಹೆಚ್ಚುವರಿ ಕಿರೀಟ ಇರಲ್ಲ ಎಂದು ಹೇಳಿದ್ದಾರೆ.
ಇನ್ನು ಪೂರ್ಣಾವಧಿ ಅಲ್ಪಾವಧಿ ಏನೇ ಇದ್ದರೂ ಎಲ್ಲಾ ಹೈಕಮಾಂಡ್ ನಿರ್ಧರಿಸಲಿದೆ. ಅಲ್ಲದೇ ಸಿಎಲ್ಪಿ ಸಭೆಯಲ್ಲೇ ಸಿಎಂ ಸಿದ್ದರಾಮಯ್ಯ ಸಹ ಹೇಳಿದ್ದಾರೆ. ಅವರೇ ಹೇಳಿದ ಮೇಲೆ ನಮ್ಮದೇನಿದೆ ಎಂದು ತಿಳಿಸಿದ್ದಾರೆ.



