ಕೋಲಾರ: ವಕ್ಫ್ ವಿಚಾರ ಮಾತನಾಡದಂತೆ ಒತ್ತಡ ಹೇರಿ ವಿಜಯೇಂದ್ರ 150 ಕೋಟಿ ರೂ.ಆಮಿಷವೊಡ್ಡಿದ್ದರು ಎಂದು ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಆರೋಪಿಸಿದ್ದು, ಸಿಬಿಐ ಹಾಗೂ ಇಡಿ ಏನು ಮಾಡುತ್ತಿವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಮೇಲೆ ಬಿಜೆಪಿ ಪಕ್ಷದ ಮುಖಂಡರೇ ಆಗಿರುವ ಅನ್ವರ್ 150ಕೋಟಿ ಆಮಿಷದ ಆರೋಪ ಮಾಡಿದ್ದಾರೆ. ಶಾಸಕ ಬಸವಗೌಡ ಯತ್ನಾಳ ಕೂಡ ಇದೇ ವಿಚಾರವನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ. ಹೀಗಾಗಿ ಬಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಇಡಿ, ಸಿಬಿಐ ಇರೋದು ಕೇವಲ ಕಾಂಗ್ರೆಸ್ಗೆ ಎನ್ನುವಂತಾಗಿದೆ. ಈಗ ಇ.ಡಿ ಸಿಬಿಐ ಅವರು ಏನ್ ಮಾಡ್ತಿದ್ದಾರೆ? ಲಂಚದ ಆರೋಪ ಮಾಡಿದ್ದು ಸಿಎಂ ಅಲ್ಲ, ಆರೋಪ ಮಾಡಿದ್ದು ಅನ್ವರ್ ಮಾನಪ್ಪಾಡಿ ಹೇಳಿದ್ದಾರೆ, ಈ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ಒತ್ತಡ ಹಾಕಿದ್ದಾರೆ. ಸತ್ಯಾಸತ್ಯತೆ ಹೊರಬರಲು ಇದು ತನಿಖೆಯಾಗಬೇಕು. ಅದಾನಿ ಮೇಲೆ ಎರಡೂವರೆ ಸಾವಿರ ಕೋಟಿ ಲಂಚ ಆರೋಪ ಆಫ್ಐಆರ್ ಆಗಿದೆ. ಆ ಪ್ರಕರಣದಲ್ಲೂ ಸಿಬಿಐ, ಇ.ಡಿ ಏನೂ ಮಾಡದೆ ನಾಟಕ ಮಾಡ್ತಿದ್ದಾರೆ ಎಂದು ಕಿಡಿಕಾಡಿದರು.





