ಬೆಂಗಳೂರು: ಅರ್ಜುನ ಆನೆ ಸಾವನ್ನಪ್ಪಿದ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಹಾಗೂ ಅದು ವಾಸವಿದ್ದ ಹೆಚ್.ಡಿ.ಕೋಟೆ ತಾಲ್ಲೂಕಿನ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
ಕಾಡಾನೆ ಕಾರ್ಯಾಚರಣೆ ವೇಳೆ ತಿವಿತಕ್ಕೊಳಗಾಗಿ ಸಾವನ್ನಪ್ಪಿದ ಅರ್ಜುನ ಆನೆಯ ಸ್ಮಾರಕ ನಿರ್ಮಿಸುವಂತೆ ಪ್ರಾಣಿಪ್ರಿಯರು ಆಗ್ರಹಿಸಿದ್ದರು. ಅರ್ಜುನ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ 8 ಬಾರಿ ಚಿನ್ನದ ಅಂಬಾರಿ ಹೊತ್ತು ಅತ್ಯಂತ ಶಾಂತ ರೀತಿಯಲ್ಲಿ ಸಾಗಿದ್ದನು.
ಆದ್ದರಿಂದ ಅರ್ಜುನ ಆನೆ ಮೃತಪಟ್ಟ ದಿನದಿಂದಲೇ ಅವನಿಗೆ ಸ್ಮಾರಕ ನಿರ್ಮಾಣ ಮಾಡಲೇಬೇಕು ಎಂದು ಎಲ್ಲೆಡೆ ಆಗ್ರಹ ಕೇಳಿಬರುತ್ತಿತ್ತು. ಇನ್ನು ಅರ್ಜುನ ಆನೆ ವಾಸವಿದ್ದ ಹೆಚ್.ಡಿ.ಕೋಟೆಯ ಬಳ್ಳೆ ಶಿಬಿರದಲ್ಲೂ ಆತನ ಸ್ಮಾರಕ ನಿರ್ಮಾಣ ಮಾಡಲೇಬೇಕು ಎಂಬ ಆಗ್ರಹ ಕೇಳಿಬರುತ್ತಿತ್ತು.
ಈ ಹಿನ್ನೆಲೆಯಲ್ಲಿ ಅರ್ಜುನ ಆನೆ ಸ್ಮಾರಕ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೈಸೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈಗ ರಾಜ್ಯ ಸರ್ಕಾರ ಎರಡೂ ಕಡೆ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಲು ಸಿದ್ಧತೆ ನಡೆಸಿದೆ.





