ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕೊರತೆ ಇದ್ದರೂ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಇಂದು(ಮಾರ್ಚ್.17) ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಎಂಎಲ್ಸಿ ಬಸನಗೌಡ ಬಾದರ್ಲಿ ಪರವಾಗಿ ಡಿ.ಟಿ.ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನಮ್ಮ ರಾಜ್ಯದಲ್ಲಿ ವಿದ್ಯುತ್ ಕೊರತೆ ಇದೆ. ಕರ್ನಾಟಕಕ್ಕೆ ಸದ್ಯ 19 ಸಾವಿ ಮೆಗಾ ವ್ಯಾಟ್ ವಿದ್ಯುತ್ನ ಬೇಡಿಕೆ ಇದೆ. ಹೀಗಿದ್ದರೂ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಆಗುತ್ತಿದೆ. ಹಾಗಾಗಿ 7 ಗಂಟೆಗಳ ಕಾಲ ವಿದ್ಯುತ್ ಅನ್ನು ನಿರಂತರವಾಗಿ ಕೊಡದೆ ಹೋದರೂ ಒಂದು ಬಾರಿ 4 ಗಂಟೆ ಹಾಗೂ ಮತ್ತೊಂದು 3 ಗಂಟೆಯಂತೆ ರೈತರಿಗೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿದರು.
ಇನ್ನು ವಿದ್ಯುತ್ ಬೇಡಿಕೆ ಹಿನ್ನೆಲೆಯಲ್ಲಿ ಈ ಬಾರಿ 56 ಸಬ್ ಸ್ಟೇಷನ್ಗಳನ್ನು ಆರಂಭಿಸಿದ್ದು, ಮುಂಬರುವ ವರ್ಷಕ್ಕೆ 100 ಸಬ್ ಸ್ಟೇಷನ್ಗಳನ್ನು ಪ್ರಾರಂಭ ಮಾಡಲು ತೀರ್ಮಾನಿಸಲಾಗಿದೆ. ಅಲ್ಲದೇ ಕಲಬುರಗಿ ಭಾಗದಲ್ಲಿ ಬೆಳಿಗ್ಗಿನ ಸಮಯ ವಿದ್ಯುತ್ ನೀಡಲು ನಮಗೆ ತೊಂದರೆ ಇಲ್ಲ. ಆದರೆ ಬೆಳಿಗ್ಗೆ ಮತ್ತು ಸಂಜೆ ನೀಡಲು ಸಮಸ್ಯೆ ಇದೆ. ಹೀಗಾಗಿ ಕರೆಂಟ್ ಪಂಪ್ ಸ್ಟೋರೇಜ್ ಮಾಡು ವ್ಯವಸ್ಥೆ ಮಾಡುತ್ತಿದ್ದೇವೆ. ಜೊತೆಗೆ ಬ್ಯಾಟರಿ ಸ್ಟೋರೇಜ್ ವ್ಯವಸ್ಥೆ ಸಹ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.