ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ನೀಡಲಾಗುತ್ತಿದ್ದ ಕೆಲವು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್.27ರಿಂದ ಡಿಸೆಂಬರ್.12ರವರೆಗೆ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್.27ರಿಂದ ಡಿಸೆಂಬರ್.12ರವರೆಗೆ ಸರ್ಪ ಸಂಸ್ಕಾರ ಸೇವೆ ಇರುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಇತರೆ ಸೇವೆಗಳು ಎಂದಿನಂತೆ ನಡೆಯಲಿವೆ ಎಂದು ಹೇಳಲಾಗಿದೆ.
ಚಂಪಾಷಷ್ಠಿಯ ದಿನ ಆಶ್ಲೇಷ ಬಲಿ ಮತ್ತು ನಾಗ ಪ್ರತಿಷ್ಠೆ ನೆರವೇರಿಸುವುದಿಲ್ಲ. ಲಕ್ಷ ದೀಪೋತ್ಸವ, ಚೌತಿ, ಪಂಚಮಿ ಚಂಪಾಷಷ್ಠಿ ದಿನ ಮತ್ತು ಕೊಪ್ಪರಿಗೆ ಇಳಿಯುವ ಮಹಾ ಸಂಪ್ರೋಕ್ಷಣೆಯ ದಿನ ಪಂಚಾಮೃತ ಅಭಿಷೇಕ ಇರುವುದಿಲ್ಲ.
ಇನ್ನು ನವೆಂಬರ್.26ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 2ರವರೆಗೆ ಭಕ್ತರಿಗೆ ದೇವರ ದರ್ಶನ ಸೇವೆ ಸಲ್ಲಿಸಲು ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ.





