Mysore
25
overcast clouds
Light
Dark

ಮಾಜಿ ಪ್ರಧಾನಿ ದೇವೇಗೌಡರು ಪ್ರಜ್ವಲ್‌ಗೆ ಪತ್ರ ಬರದಿರುವ ಬಗ್ಗೆ ನನಗೆ ಗೊತ್ತಿಲ್ಲ: ಎಚ್‌.ಡಿ ರೇವಣ್ಣ

ಧರ್ಮಸ್ಥಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದಿರುವ ಹೊಳೆ ನರಸೀಪುರ ಶಾಸಕ ಎಚ್‌.ಡಿ ರೇವಣ್ಣ ಇಂದು (ಸೋಮವಾರ, ಮೇ.27) ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಮಾರು ನಾಲ್ಕು ದಶಕಗಳಿಂದ ನಾನು ರಾಜಕೀಯದಲ್ಲಿ ಸಕ್ರಿಯನಾಗಿದ್ದೇನೆ. ಹೊಳೆ ನರಸೀಪುರ ಶಾಸಕನಾಗಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ತಮ್ಮ ಹಾಗೂ ಪುತ್ರ ಪ್ರಜ್ವಲ್‌ ಮೇಲಿನ ಆರೋಪದ ಕುರಿತು ಮಾತನಾಡಲು ನಿರಾಕರಿಸಿದ ರೇವಣ್ಣ, ಈ ನೆಲದ ಕಾನೂನಿನ ಮೇಲೆ ನನಗೆ ಅಪಾರ ಗೌರವ, ವಿಶ್ವಾಸ ಮತ್ತು ನಂಬಿಕೆಯಿದೆ ಎಂದು ತಿಳಿಸಿದರು.

ಈ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣ ಹಂತದಲ್ಲಿರುವುದರಿಂದ ಈ ಬಗ್ಗೆ ಕಾಮೆಂಟ್‌ ಮಾಡುವುದು ಸರಿಯಲ್ಲ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ ಎಂದರು.

ಇನ್ನು ಪ್ರಜ್ವಲ್‌ ರೇವಣ್ಣ ವಿರುದ್ಧ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೆಗೌಡರು ಭಾರತಕ್ಕೆ ಹಿಂತಿರುಗಿ ಕಾನೂನಿನ ಮುಂದೆ ಶರಣಾಗುವಂತೆ ಪತ್ರ ಬರೆದಿದ್ದಾರೆ ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಯಾವುದೇ ಪ್ರತಿಕ್ರಿಯೆ ನೀಡದ ರೇವಣ್ಣ ಪತ್ರ ಬರೆದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ ಎಂದು ತೆರಳಿದರು.