ಚಿಕ್ಕಮಗಳೂರು : ರಾಜಕೀಯಕ್ಕೆ ಬಂದ ಸಂದರ್ಭದಿಂದಲೂ ನಾನು ಒಬ್ಬಂಟಿ. ನನ್ನ ಬಗ್ಗೆ ಯೋಚನೆ ಮಾಡಬೇಕಾಗಿರುವುದು ಪಕ್ಷ ಮಾತ್ರ ಎಂದು ಈಶ್ವರಪ್ಪ ಅವರಿಗೆ ಸಿಟಿ ರವಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಂತು ಪಕ್ಷದ ಕಟ್ಟಾ ಕಾರ್ಯಕರ್ತ. ೧೯೮೮-೯೯ರಲ್ಲಿ ಬಿಜೆಪಿಯನ್ನು ಆರಿಸಿಕೊಂಡಾಗ ನನ್ನ ಮನೆ ಹಾಗೂ ನನ್ನ ಊರಿನಲ್ಲು ನಾನು ಒಬ್ಬಂಟಿಯಾಗಿದ್ದೆ. ಒಂದೊಂದೆ ಮೆಟ್ಟಿಲು ಹತ್ತುತ್ತಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದವರೆಗೆ ಬಂದಿದ್ದೇನೆ ಎಂದು ತಿಳಿಸಿದರು.
ನನ್ನ ಬಗ್ಗೆ ಯೋಚನೆ ಮಾಡಬೇಕಾಗಿರುವುದು ಪಕ್ಷ ಮಾತ್ರ. ಪಕ್ಷವನ್ನು ಬಲ ಪಡಿಸುವುದು ನನ್ನ ಕೆಲಸ. ಅದನ್ನು ಮಾಡುತ್ತಾ ಬಂದಿದ್ದೇನೆ. ವೈಯಕ್ತಿಕ ಹಿತಾಸಕ್ತಿಯನ್ನು ಮೀರಿದ ಚುನಾವಣೆ ಇದು, ಕೇವಲ ರಾಷ್ಟ್ರೀಯ ಹಿತಾಶಕ್ತಿಯನ್ನು ಮಾತ್ರ ಚಿಂತೆ ಮಾಡಬೇಕಿದೆ ಎಂದರು.
ಮೋದಿ ಮತ್ತೊಮ್ಮೆ ಎಂಬ ಒಂದೇ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತೇವೆ ಎಂದರು.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಹಿರಿಯರು ಮತ್ತು ಹಿಂದಿನಿಂದಲೂ ಒಳ್ಳೆಯ ಸ್ನೇಹಿತರು. ರಾಜಕೀಯಕ್ಕೆ ಬರುವ ಮುಂಚಿನಿಂದಲೂ ಬಿಸಿನೆಸ್ ಪಾರ್ಟ್ನರ್ಸ್ ಆಗಿದ್ದರು ಎಂದು ಕೇಳಿದ್ದೇನೆ. ಅವರಿಬ್ಬರ ಮಧ್ಯೆ ಏನೇ ಸಮಸ್ಯೆ ಇದ್ದರೂ ಯಡಿಯೂರಪ್ಪ ಅವರು ಸರಿಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.