Mysore
21
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

2ನೇ ಮದುವೆಗೆ ಸಜ್ಜಾಗಿದ್ದ ವರ : ಕಲ್ಯಾಣ ಮಂಟಪಕ್ಕೆ ಬಂದು ಮದುವೆ ನಿಲ್ಲಿಸಿದ ಮೊದಲ ಹೆಂಡತಿ!

ತುಮಕೂರು : ಈಗಾಗಲೇ ಮದುವೆಯಾಗಿ ಹೆಂಡತಿಯಿದ್ದರೂ 2ನೇಯ ಮದುವೆಗೆ ತಯಾರಿ ನಡೆಸಿ ಕಲ್ಯಾಣ ಮಂಟಪದಲ್ಲಿ ಇನ್ನೇನು ಮಾಂಗಲ್ಯ ಧಾರಣೆ ನಡೆಯಬೇಕು ಎನ್ನುವಷ್ಟರಲ್ಲಿ ಮೊದಲನೇಯ ಹೆಂಡತಿ ಪ್ರತ್ಯಕ್ಷವಾಗಿ ಮದುವೆಗೆ ಬ್ರೇಕ್ ಬಿದ್ದ ಘಟನೆ ಕುಣಿಗಲ್ ತಾಲ್ಲೂಕು ಎಡೆಯೂರಿನಲ್ಲಿ ಭಾನುವಾರ ನಡೆದಿದೆ.

ಬೆಂಗಳೂರಿನ ಆರ್.ಆರ್ ನಗರದ ಹರೀಶ್ ಪ್ರಸಾದ್ ಅಲಿಯಾಸ್ ಪ್ರಸಾದ್ ಎಂಬಾತ ಲೇಪಾಕ್ಷಿ ಎಂಬಾಕೆಯನ್ನು ಕಳೆದ 11 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಆದರೂ, ಈತ ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ದೇವಾಲಯದ ಬಳಿ ಎಸ್,ಎಲ್,ಎನ್ ಕಲ್ಯಾಣ ಮಂಟಪದಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಅಲಗೂರು ಗ್ರಾಮದ ಯುವತಿಯೊಂದಿಗೆ ಎರಡನೆ ಮದುವೆಗೆ ಸಜ್ಜಾಗಿದ್ದನು. ಈ ವೇಳೆ ಮೊದಲನೆ ಪತ್ನಿ ಲೇಪಾಕ್ಷಿ ತಾಳಿ ಕಟ್ಟುವ ವೇಳೆಗೆ ಪೊಲೀಸರು ಹಾಗೂ ಕುಟುಂಬಸ್ಥರೊಂದಿಗೆ ಕಲ್ಯಾಣ ಮಂಟಪಕ್ಕೆ ಹಾಜರಾಗಿದ್ದನ್ನು ಕಂಡು ವರ ಮಹಾಶಯ ಕಕ್ಕಾಬಿಕ್ಕಿಯಾಗಿದ್ದಾನೆ.

ಶಾಲೆಯಿಂದ ಗೆಳೆಯರಾಗಿದ್ದ ಇಬ್ಬರು ಪ್ರೀತಿಸಿ 2014 ರಲ್ಲಿ ಕುಟುಂಬಸ್ಥರು ಶೃಂಗೇರಿಯಲ್ಲಿ ಮದುವೆ ಮಾಡಿಸಿದ್ದರು. ಪತಿ ಹರೀಶ್ ಪ್ರಸಾದ್ ಬೇರೊಂದು ಮದುವೆಗೆ ಸಜ್ಜಾಗಿರುವುದು ತಿಳಿದು ಶನಿವಾರ ಆರ್.ಆರ್ ನಗರದ ಪೊಲೀಸ್ ಠಾಣೆಯಲ್ಲಿ ಮೊದಲನೆ ಪತ್ನಿ ದೂರು ದಾಖಲಿಸಿದ್ದಳು. ಬಳಿಕ ಭಾನುವಾರ ಅಮೃತೂರು ಪೂಲೀಸರ ಸಮ್ಮುಖದಲ್ಲಿ ಗಂಡ ಎರಡನೇ ಮದುವೆ ಆಗುವುದನ್ನು ತಡೆದಿದ್ದಾಳೆ.

ಈ ವೇಳೆ ವಧುವಿನ ಕುಟುಂಬಸ್ಥರಿಗೆ ಶಾಕ್ ಆಗಿದೆ. ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಯೂ ನಡೆದು ಹೋಗಿದೆ. ಸ್ಥಳದಲ್ಲಿದ್ದ ಪೊಲೀಸರು ಗಲಾಟೆ ಬಿಡಿಸಿ ಮದುವೆಗೆ ಸಜ್ಜಾಗಿರುವ ಗಂಡನ್ನು ಠಾಣೆಗೆ ಕರೆದೊಯ್ಯುವ ಮೂಲಕ ಇನ್ನೇನು ನಡೆದು ಹೋಗಬೇಕಿದ್ದ ಮದುವೆಗೆ ಬ್ರೇಕ್ ಬಿದ್ದಿದೆ.

 

Tags:
error: Content is protected !!