ಬೆಂಗಳೂರು: ಕುಲಪತಿ ನೇಮಕಾತಿ ವಿಚಾರದಲ್ಲಿ ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಾಗೆ ರಾಜ್ಯಾಪಾಲರು ನಡೆದುಕೊಳ್ಳುತ್ತಿದ್ದಾರೆ ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಚಾರದಲ್ಲಿ ಸಿಎಂಗೆ ಪತ್ರ ಬರೆದಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ ಅವರು, ಸದನ ಅಂಗೀಕರಿಸಿದ ಮಸೂದೆಗೆ ಕಿಮ್ಮತ್ತು ಇಲ್ಲವೇ ಎಂದು ಪ್ರಶ್ನಿಸಿದರು.
ಕುಲಪತಿ ನೇಮಕಾತಿ ವಿಚಾರದಲ್ಲಿ ಮುಕ್ತ ಅವಕಾಶಕ್ಕಾಗಿ ನಾವು ಮಸೂದೆ ಮಂಡಿಸಿ, ಎರಡೂ ಸದನಗಳಲ್ಲಿ ಅಂಗೀಕರಿಸಿದ್ದೇವೆ. ಆದರೆ, ರಾಜ್ಯಪಾಲರಿಗೆ ಇಷ್ಟ ಆಗಿಲ್ಲ ಎಂದಾದರೆ ನಾವೇನು ಮಾಡಲು ಆಗುತ್ತದೆ ಎಂದರು.
ಮಸೂದೆಗಳನ್ನ ಮಂಡಿಸಿ ಅಂಗೀಕರಿಸಲು ವಿಧಾನಸಭೆಯೇ ಸುಪ್ರೀಂ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಆದರೂ, ರಾಜ್ಯಾಪಾಲರು ಒಪ್ಪದೇ ಇರುವುದು ದುರದೃಷ್ಟಕರ ಎಂದರು.





