ಬೆಂಗಳೂರು : ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆ ಮತ್ತು ನಕಲಿ ಬಿಲ್ ಗಳಿಗೆ ಕಡಿವಾಣ ಹಾಕಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್ ಅನುಷ್ಠಾನಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ನೀರು ಸರಬರಾಜು ಮತ್ತು ಮೂಲಸೌಕರ್ಯದ ಸುಸ್ಥಿರ ಮತ್ತು ವೈಜ್ಞಾನಿಕ ನಿರ್ವಹಣೆಗಾಗಿ ಸಿದ್ಧಪಡಿಸಲಾಗಿರುವ ಮೊಬೈಲ್ ಮತ್ತು ವೆಬ್ ಅಪ್ಲಿಕೆಷನ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಜಿಯೋ ಟ್ಯಾಗ್ ಮಾಡಿ ಪಾರದರ್ಶಕತೆ ತರಲಾಗುವುದು ಎಂದರು.
ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಜಲ ಆಸ್ತಿಗಳಿದ್ದು ಇವೆಲ್ಲವನ್ನೂ ಸೆಪ್ಟೆಂಬರ್ ಅಂತ್ಯದೊಳಗೆ ಡಿಜಟಲೀಕರಿಸಲಾಗುವುದು. ಈಗಾಗಲೇ ಮೊದಲ ಹಂತದ ಪರಿಶೀಲನೆ ಅಡಿಯಲ್ಲಿ ಈವರೆಗೆ 70 ಸಾವಿರಕ್ಕೂ ಅಧಿಕ ಜಲ ಸ್ವತ್ತುಗಳ ದಾಖಲೀಕರಣ ಮಾಡಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಆ ವ್ಯವಸ್ಥೆಯಡಿ 3 ಹಂತದ ಪರಿಶೀಲನೆ ನಡೆಯಲಿದ್ದು, ಮೊದಲ ಹಂತದಲ್ಲಿ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಮತ್ತು ಸಪೋರ್ಟ್ ಎಂಜಿನಿಯರ್ ಗಳು ನೂರಕ್ಕೆ 100ರಷ್ಟು ಜಲ ಆಸ್ತಿಯ ಖುದ್ದು ಪರಿಶೀಲನೆ ನಡೆಸಲಿದ್ದಾರೆ. 2ನೇ ಹಂತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳು ಶೇ.5ರಷ್ಟು ಆಸ್ತಿಯ ಯಾದೃಚ್ಛಿಕ (Random) ಪರಿಶೀಲನೆ ಮಾಡುತ್ತಾರೆ. ಈ ಹಂತದಲ್ಲಿ ಲೋಪ ಕಂಡು ಬಂದಲ್ಲಿ ಸಂಬಂಧಿತ ಗುತಿಗೆದಾರರು, ಎಂಜಿನಿಯರುಗಳನ್ನು ಹೊಣೆ ಮಾಡಲಾಗುವುದು ಎಂದರು.
ಮೂರನೇ ಹಂತದಲ್ಲಿ ಕಾರ್ಯಪಾಲಕ ಎಂಜಿನಿಯರ್ ಶೇ.2ರಷ್ಟು ಆಸ್ತಿಯ ಯಾದೃಚ್ಛಿಕ ಪರಿಶೀಲನೆ ನಡೆಸುತ್ತಾರೆ. 3 ಹಂತದ ತಪಾಸಣೆ ನಡೆಯುವ ಕಾರಣ ಗುತ್ತಿಗೆದಾರರಿಗೆ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಅನುಷ್ಠಾನ ಮಾಡುವ ಕೆಳ ಹಂತದ ಅಧಿಕಾರಿಗಳಲ್ಲಿ ಹೊಣೆಗಾರಿಕೆ ಹೆಚ್ಚುತ್ತದೆ ಮತ್ತು ಇದು ಪಾರದರ್ಶಕತೆ ತರಲು ಸಹಕಾರಿಯಾಗುತ್ತದೆ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರ (KSRSAC) ಸಹಯೋಗದಲ್ಲಿ ಈ ಮೊಬೈಲ್ ಮತ್ತು ವೆಬ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದ ಈಶ್ವರ ಖಂಡ್ರೆ, ಇದು ಎಲ್ಲ ಕಾಮಗಾರಿ ಮತ್ತು ಜಲ ಆಸ್ತಿಗಳನ್ನು 5 ಮೀಟರ್ ನಿಖರತೆಯೊಂದಿಗೆ ಜಿಯೋ ಟ್ಯಾಗ್ ಮಾಡಲು ನೆರವಾಗುತ್ತದೆ ಎಂದರು. ಇದರಿಂದ ಕಾಮಗಾರಿಯನ್ನೇ ಮಾಡದೆ ನಕಲಿ ಬಿಲ್ ಮಾಡಲು ಅವಕಾಶ ಇರುವುದಿಲ್ಲ ಮತ್ತು ಸೃಜಿಸಲಾದ ಆಸ್ತಿಯ ಗುಣಮಟ್ಟದ ಪರೀಕ್ಷೆಗೂ ಸಹಕಾರಿಯಾಗುತ್ತದೆ. ಎಲ್ಲ ಜಲ ಆಸ್ತಿಗಳ ಮೂಲ ಮಾಹಿತಿ, ಅವುಗಳ ಭೌತಿಕ ಸ್ಥಿತಿ, ಕಾರ್ಯಾಚರಣೆ ಮತ್ತು ನಿರ್ವಹಣೆಯ ಸ್ಥಿತಿಗತಿ ಈ ಆಪ್ ನಲ್ಲಿ ದಾಖಲಾಗುವ ಕಾರಣ ಸರ್ಕಾರದ ಯೋಜನೆ ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಕರ್ನಾಟಕ ದೂರ ಸಂವೇದಿ ಆನ್ವಯಿಕ ಕೇಂದ್ರ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.




