Mysore
20
mist

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಜಲಮೂಲಗಳ ಬಫರ್ ಝೋನ್ ವಿಸ್ತರಣೆ

ಬೆಂಗಳೂರು : ಕರ್ನಾಟಕದಲ್ಲಿ ದೇಶದಲ್ಲೇ ಪ್ರಪ್ರಥಮವಾಗಿ ಜಲಮೂಲಗಳು/ಕೆರೆಗಳ ಗಾತ್ರಕ್ಕೆ ಅನುಗುಣವಾಗಿ ವೈಜ್ಞಾನಿವಾಗಿ ಬಫರ್ ಝೋನ್ ನಿಯಮಾವಳಿಗಳ ತಿದ್ದುಪಡಿ ಪ್ರಸ್ತಾಪಿಸಲಾಗಿದೆ ಎಂದು ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ದಿ ಪ್ರಾಧಿಕಾರ ತಿಳಿಸಿದೆ.

ಕೆರೆ ಮತ್ತು ಕಾಲುವೆ ಬಫರ್ ತಿದ್ದುಪಡಿ ಪ್ರಸ್ತಾವನೆಯ ಕುರಿತು ಹೇಳಿಕೆ ನೀಡಿರುವ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ದಿ ಪ್ರಾಧಿಕಾರ, ಈ ತಿದ್ದುಪಡಿಗೆ ಕಾರಣವಾದ ಅಂಶಗಳನ್ನು ಸ್ಪಷ್ಟಪಡಿಸಿದೆ. ಕರ್ನಾಟಕ ರಾಜ್ಯದ ಜಲಾಶಯಗಳನ್ನು ಸಂರಕ್ಷಿಸುವುದು, ಕಾಪಾಡುವುದು ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ರಚನೆಯಾಗಿರುವ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಸಾಮಾನ್ಯವಾಗಿ ಬಫರ್ ವಲಯಗಳು ಮಾನವ ಚಟುವಟಿಕೆ ಮತ್ತು ಸೂಕ್ಷ್ಮ ಪರಿಸರವನ್ನು ಹೊಂದಿರುವ ಜಲ ಸಂಪನ್ಮೂಲಗಳ ನಡುವೆ ತಡೆಗೊಡೆಯಾಗಿ ಹಾಗೂ ರಕ್ಷಣಾ ಪ್ರದೇಶವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದೆ.
ರಾಜ್ಯದಲ್ಲಿ ೧ ಗುಂಟೆಯಿಂದ ೧,೦೦೦ ಎಕರೆಗಳವರೆಗೆ ವಿವಿಧ ಗಾತ್ರದ ೪೧,೮೪೯ ಕೆರೆಗಳಿವೆ. ಆದ್ದರಿಂದ ರಾಜ್ಯದಾದ್ಯಂತ ಮಾರ್ಗಸೂಚಿಗಳ ಏಕರೂಪತೆ ತರುವುದು ಅಗತ್ಯ ಎಂದು ಪರಿಗಣಿಸಿ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದೆ.

ಸಾರ್ವಜನಿಕ ಉಪಯೋಗಕ್ಕಾಗಿ ಕುಡಿಯುವ ನೀರಿನ ಪೈಪ್‌ಲೈನ್‌ಗಳು, ಭೂಗತ ವಿದ್ಯುತ್ ಕೇಬಲ್‌ಗಳು, ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳು, ಏತ ನೀರಾವರಿ ಯೋಜನೆಗಳು, ಜ್ಯಾಕ್‌ವೆಲ್ / ಪಂಪ್ ಹೌಸ್, ಕೊಳಚೆ ನೀರು ಶುದ್ಧೀಕರಣ ಘಟಕಗಳು ಮುಂತಾದ ಸಾರ್ವಜನಿಕ ಉಪಯೋಗ ಕಾಮಗಾರಿಗಳನ್ನು ಕೆರೆ ಬಫರ್‌ನಲ್ಲಿ ಅಳವಡಿಸುವುದು ಅತ್ಯಾವಶ್ಯಕವಾಗಿದೆ.

ಕೂಲಂಕಷ ಪರಿಶೀಲನೆಯ ನಂತರ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ, ದೇಶದ ಇತರೆ ರಾಜ್ಯಗಳು ಅನುಸರಿಸಿರುವ ಕೆರೆ ಬಫರ್‌ಗಳನ್ನು ಪರಿಗಣಿಸಿ, ಕೆರೆಯ ಗಾತ್ರದ ಆಧಾರದ ಮೇಲೆ ಈ ಬಫರ್ ವಲಯವನ್ನು ತಿದ್ದುಪಡಿ ಮಾಡುವುದಾಗಿ ಪ್ರಸ್ತಾಪಿಸಲಾಗಿದೆ.

A.5 ಗುಂಟೆವರೆಗೆ – 0 ಮೀಟರ್‌
B.5 ಗುಂಟೆಯಿಂದ 1 ಏಕರೆಯವರೆಗೆ – 3.0 ಮೀಟರ್‌
C.1 ಏಕರೆಯಿಂದ 10 ಏಕರೆಯವರೆಗೆ – 6.0 ಮೀಟರ್‌
D.10 ಏಕರೆಯಿಂದ 25 ಏಕರೆಯವರೆಗೆ – 12.0 ಮೀಟರ್‌
E.25 ಏಕರೆಯಿಂದ 100 ಏಕರೆಯವರೆಗೆ – 24.0 ಮೀಟರ್‌
F.100 ಏಕರೆಗಿಂತ ದೊಡ್ಡದಾದ ಕೆರೆಗಳಿಗೆ – 30.0 ಮೀಟರ್‌

ಈ ಬಫರ್ ಅಂತರವನ್ನು ರೂಪಿಸುವಾಗ ವೈಜ್ಞಾನಿಕ ದೃಷ್ಟಿಕೋನವನ್ನು ಅನುಸರಿಸಲಾಗಿದೆ. ಕೆರೆ ಬಫರ್ ಎಂದರೆ ಕೆರೆಯ ಸುತ್ತಲಿನ ಪ್ರದೇಶವು ಮಳೆ ನೀರನ್ನು ಕೆರೆಗೆ ಹರಿಯಲು ಅನುಕೂಲವಾಗುವಂತೆ ಮಾಡುವುದು. ಅನೇಕ ಸಂದರ್ಭಗಳಲ್ಲಿ, ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯಲ್ಲಿ, ಹಳೆಯ ಬಫರ್ ಝೋನ್‌ ಪ್ರದೇಶವು ಕೆರೆಯ ಗಾತ್ರಕ್ಕಿಂತ ಹೆಚ್ಚಿತ್ತು. ಕರ್ನಾಟಕ ರಾಜ್ಯದಲ್ಲಿ ಮೊದಲು, ಕೆರೆಗಳ ಮೇಲೆ ಬಂಡೆ ನಿರ್ಮಿಸಲಾಗುತ್ತಿತ್ತು ಮತ್ತು ಸಾರ್ವಜನಿಕರು ತಮ್ಮ ಸಂಚಾರಕ್ಕಾಗಿ ಕೆರೆ ಬಂಡೆಯನ್ನು ರಸ್ತೆವಾಗಿ ಬಳಸುತ್ತಿದ್ದರು. ಹೀಗಾಗಿ, ಇದೇ ರೀತಿಯಲ್ಲಿ ಈ ಬಾರಿ ಕೆರೆಗಳ ಗಾತ್ರದ ಆಧಾರದ ಮೇಲೆ ಬಫರ್ ಝೋನ್‌ ನಿಗದಿಪಡಿಸಲಾಗಿದೆ – ಕೆರೆ ಸಣ್ಣದಾಗಿದ್ದರೆ ಕಡಿಮೆ ಬಫರ್ ಝೋನ್‌, ಕೆರೆ ದೊಡ್ಡದಾಗಿದ್ದರೆ ಹೆಚ್ಚು ಬಫರ್ ಝೋನ್‌ ನಿಗದಿಪಡಿಸಲಾಗಿದೆ.

ಇತರೆ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಬಫರ್‌ ಝೋನ್‌ ಅಳವಡಿಸಿಕೊಳ್ಳಲಾಗಿದೆ ಎಂದು ಅಧ್ಯಯನ ನಡೆಸಲಾಗಿದೆ. ಗುಜರಾತ್ ರಾಜ್ಯದಲ್ಲಿ ಜಲಮೂಲಗಳ ಪ್ರದೇಶದಿಂದ 9 ಮೀ ಬಫರ್ ನಿಗದಿಪಡಿಸಲಾಗಿದೆ. ತೆಲಂಗಾಣ ರಾಜ್ಯದಲ್ಲಿ 10 ಹೆಕ್ಟೇರ್‌ಗಿಂತ ದೊಡ್ಡದಾದ ಕೆರೆಗೆ 30 ಮೀ ಮತ್ತು 9 ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣದ ಕೆರೆಗೆ 9 ಮೀ ಬಫರ್ ನಿಗದಿಪಡಿಸಲಾಗಿದೆ. ತಮಿಳುನಾಡು ರಾಜ್ಯದಲ್ಲಿ ಏಕರೂಪವಾಗಿ ಕೆರೆಗಳ ಅಂಚಿನಿಂದ 3 ಮೀ ಬಫರ್ ಝೋನ್‌ ಅನುಸರಿಸಲಾಗಿದೆ. *ಕರ್ನಾಟಕವು ರಾಜ್ಯವು ವೈಜ್ಞಾನಿಕವಾಗಿ ಜಲಮೂಲಗಳ ಗಾತ್ರಕ್ಕೆ ಅನುಗುಣವಾಗಿ ಹೆಚ್ಚಿಸಿರುವ ಬಫರ್ ಝೋನ್‌ ಮಾರ್ಗಸೂಚಿಗಳನ್ನು ರೂಪಿಸಿರುವ ಏಕೈಕ ರಾಜ್ಯವಾಗಿದೆ.*

ಕಾಲುವೆ ಬಫರ್‌ಗಳ ವಿಷಯದಲ್ಲಿ, ಪ್ರಸ್ತುತ 30 ಮೀ (ಪ್ರಾಥಮಿಕ ಕಾಲುವೆ), 15 ಮೀ (ದ್ವಿತೀಯ ಕಾಲುವೆ), 10 ಮೀ (ತೃತೀಯ ಕಾಲುವೆ) ಅವೈಜ್ಞಾನಿಕವಾಗಿದ್ದು, ಅನೇಕ ಸಂದರ್ಭಗಳಲ್ಲಿ ಕಾಲುವೆಯ ಅಗಲವೇ ಬಫರ್‌ಗಿಂತ ಕಡಿಮೆಯಾಗಿದೆ. ಆದ್ದರಿಂದ, ಪರಿಶೀಲನೆಯ ನಂತರ, ಹೊಸ ಕಾಲುವೆ ಬಫರ್‌ಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
– ಪ್ರಾಥಮಿಕ ಕಾಲುವೆ – 15 ಮೀ
– ದ್ವಿತೀಯ ಕಾಲುವೆ – 10 ಮೀ
– ತೃತೀಯ ಕಾಲುವೆ – 5 ಮೀ.

ಪ್ರಸ್ತಾಪಿತ ತಿದ್ದುಪಡಿಯ ಲಾಭಗಳೇನು?
1.ಬಫರ್ ವಲಯದಲ್ಲಿ ಕೆರೆಯ ಸಾಮರ್ಥ್ಯವನ್ನು ಕುಗ್ಗಿಸದೆ ಹಾಗೂ ನೀರಿನ ಹರಿವಿಗೆ ಅಡ್ಡಿಪಡಿಸದಂತಹ ಸಾರ್ವಜನಿಕರಿಗೆ ಉಪಯೋಗವಾಗುವ ಯೋಜನೆಗಳನ್ನು ಮಾತ್ರ ಕೈಗೊಳ್ಳಲಾಗುತ್ತದೆ. ಇದರಿಂದ ಕೆರೆಯ ಸಾಮರ್ಥ್ಯ ಕಡಿಮೆಯಾಗುವುದಿಲ್ಲ ಮತ್ತು ನೀರಿನ ಹರಿವು ಅಡ್ಡಿಯಾಗುವುದಿಲ್ಲ.
2.ಹಲವಾರು ಪ್ರಕರಣಗಳಲ್ಲಿ ಕೆರೆ ಬಫರ್ ಝೋನ್‌ ಖಾಸಗಿ ಭೂಮಿಯಾಗಿದ್ದು, ‘ನಿರ್ಮಾಣ ನಿಷೇಧ ವಲಯ’ ಎಂದು ಘೋಷಿಸಲಾಗಿದೆ.
3.ಈ ತಿದ್ದುಪಡಿಯಿಂದ ಪ್ರವಾಹ ಪ್ರಕರಣಗಳು ಹೆಚ್ಚಾಗುವುದಿಲ್ಲ, ಬದಲಾಗಿ ಉತ್ತಮ ಮೂಲಸೌಕರ್ಯ ಅಭಿವೃದ್ಧಿಯಿಂದ ನಗರ ಪ್ರದೇಶಗಳಲ್ಲಿ ಪ್ರವಾಹ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
4.ಈ ತಿದ್ದುಪಡಿ ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಅಲ್ಲ. ಇದು ಕೆರೆಯ ಗಾತ್ರಕ್ಕೆ ಅನುಗುಣವಾಗಿ ಬಫರ್ ವಲಯಗಳಲ್ಲಿ ಏಕರೂಪತೆಯನ್ನು ನಿಗದಿಪಡಿಸುವ ಗುರಿಯನ್ನು ಹೊಂದಿದೆ.
5.ತಿದ್ದುಪಡಿಯಿಂದ ಜಲಮೂಲಗಳ ಜೀವವೈವಿಧ್ಯತೆಯ ಮೇಲೆ ಯಾವುದೇ ಪರಿಣಾಮಗಳನ್ನು ಬೀರುವುದಿಲ್ಲ. ಬದಲಿಗೆ ಸರ್ಕಾರಗಳು ನಗರಗಳಿಗೆ ಮೂಲಸೌಕರ್ಯ ಒದಗಿಸಲು ಸಹಾಯ ಮಾಡುತ್ತದೆ. ಕೆರೆಗಳಿಗೆ ಕೊಳಚೆ ನೀರು ಹರಿಯುವುದನ್ನು ತಡೆಗಟ್ಟಲು ಎಸ್‌ಟಿಪಿಗಳ ನಿರ್ಮಾಣ ಅಗತ್ಯ. ಈ ಹಿನ್ನಲೆಯಲ್ಲಿ ಹಾನಿಕಾರಕ ಕೊಳಚೆ ನೀರು ಸೇರ್ಪಡೆಯಾಗದಂತೆ ತಡೆಗಟ್ಟಲು ಕೆರೆಗಳು ಹಾಗೂ ಜಲಮೂಲಗಳ ಹತ್ತಿರ ಎಸ್‌ಟಿಪಿಗಳ ನಿರ್ಮಾಣಕ್ಕೆ ಇದು ಅನುವು ಮಾಡಿಕೊಡುತ್ತದೆ.
6.ಈ ತಿದ್ದುಪಡಿ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯಗಳ ನಡುವಿನ ಸಮತೋಲನವನ್ನು ಸಾಧಿಸುತ್ತದೆ.
7.ಬಫರ್ ವಲಯದಲ್ಲಿ ನೀರು, ಒಳಚರಂಡಿ, ವಿದ್ಯುತ್ ಮುಂತಾದ ಉಪಯೋಗ ಜಾಲಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ, ಇದು ನಗರ ಪ್ರದೇಶಗಳ ಒಟ್ಟು ಮೂಲಸೌಕರ್ಯವನ್ನು ಸುಧಾರಿಸಲು ಸಹಾಯಕಾರಿಯಾಗಲಿದೆ.

Tags:
error: Content is protected !!