ಬೆಂಗಳೂರು : ಎಚ್ಎಂಟಿ ವಶದಲ್ಲಿರುವ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಅಂದಿನ ಅರಣ್ಯ ಸಚಿವರ ಮತ್ತು ಸಚಿವ ಸಂಪುಟದ ಅನುಮತಿ ಇಲ್ಲದೆ ಅರ್ಜಿ ಸಲ್ಲಿಸಿರುವ ಐ.ಎಫ್.ಎಸ್. ಅಧಿಕಾರಿ ಆರ್.ಗೋಕುಲ್ ಅಮಾನತನ್ನು ಸಚಿವ ಈಶ್ವರ ಖಂಡ್ರೆ ಸಮರ್ಥಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಸಾವಿರ ಕೋಟಿ ರೂ. ಬೆಲೆ ಬಾಳುವ ಅರಣ್ಯ ಭೂಮಿಯಲ್ಲಿ ಇಂದಿಗೂ 280 ಎಕರೆಯಷ್ಟು ಅರಣ್ಯವಿದೆ. ಆದರೆ ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ ಗೆ ಸುಳ್ಳು ಪ್ರಮಾಣಪತ್ರ ನೀಡಿದ ಅಧಿಕಾರಿಗಳ ನಡೆ, ಕಾನೂನು ಬಾಹಿರವಾಗಿದ್ದು, ಇದು ಸರ್ಕಾರಕ್ಕೆ, 7 ಕೋಟಿ ಜನರಿಗೆ ಮಾಡಿದ ಅಪಚಾರ ಮತ್ತು ದ್ರೋಹ. ಹೀಗಾಗಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಿದೆ. ಇದಕ್ಕೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ, ಅದು ರಾಜ್ಯಕ್ಕೆ ಮಾಡುವ ದ್ರೋಹ ಎಂದರು.
ಬನ್ನೇರುಘಟ್ಟದಲ್ಲಿ ಪ್ರಥಮ ಇ.ವಿ. ಸಫಾರಿ ಬಸ್:
ವಾಹನಗಳಿಂದ ಹೆಚ್ಚುತ್ತಿರುವ ಇಂಗಾಲದ ಹೊರಹೊಮ್ಮುವಿಕೆ ತಡೆಯಲು ಇಲಾಖೆ ಪ್ರಯತ್ನಶೀಲವಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಬನ್ನೇರುಘಟ್ಟ ಸಫಾರಿಯಲ್ಲಿ ಹೊಗೆ ರಹಿತ ಇ.ವಿ. – ವಿದ್ಯುತ್ ಚಾಲಿತ ವಾಹನ ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.
ನಾಳೆ ಈ ವಾಹನಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಅವರು, ನಾಳೆ ಸಚಿವ ಸಂಪುಟದ ಸಭೆ ಇದ್ದು, ಕೇರಳ ರಾಜ್ಯದ ಅರಣ್ಯ ಸಚಿವರು ಭೇಟಿಯಾಗಲು ಬರುತ್ತಿರುವ ಹಿನ್ನೆಲೆಯಲ್ಲಿ ಈ ವಾರಾಂತ್ಯದೊಳಗೆ ಇ.ವಿ. ಸಫಾರಿ ವಾಹನಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.





