ಮಂಗಳೂರು : ಹಲವು ಮೃತದೇಹ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಇಂದು ಮುಂದುವರೆದಿದ್ದು, ನಾಲ್ಕನೇ ಸ್ಥಳವನ್ನು ಉತ್ಖನನ ಮಾಡಲಾಗಿದೆ. ಯಾವುದೇ ಅಸ್ಥಿಪಂಜರ ದೊರಕಿಲ್ಲ. ಆದರೆ, ಎರಡು ಕಾರ್ಡ್ ಮತ್ತು ಹರಿದ ರವಿಕೆ ಪತ್ತೆಯಾಗಿವೆ.
ಒಂದನೇ ಸ್ಥಳದ ಎರಡು ID ಕಾರ್ಡ್ಗಳು ಲಭ್ಯವಾಗಿದ್ದವು ಎಂಬ ಸ್ಫೋಟಕ ವಿಚಾರವನ್ನು ವಕೀಲರೊಬ್ಬರು ಹೇಳಿದ್ದಾರೆ. ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಅನನ್ಯ ಭಟ್ ಎಂಬುವರ ತಾಯಿ ಸುಜಾತ ಭಟ್ ಪರ ವಕೀಲ ಮಂಜುನಾಥ್ ಅವರ ಪತ್ರಿಕಾ ಪ್ರಕಟಣೆ ಹೊರಡಿಸಿ, ಈ ವಿಚಾರ ತಿಳಿಸಿದ್ದಾರೆ.
ಸದ್ಯ ಅದು ವೈರಲ್ ಆಗಿದೆ. ಪಾಯಿಂಟ್ ನಂಬರ್ 1ರಲ್ಲಿ ಕೆಂಪು ಬ್ಲೌಸ್, ಪ್ಯಾನ್ಕಾರ್ಡ್, ಎಟಿಎಂ ಕಾರ್ಡ್ ಪತ್ತೆಯಾಗಿದೆ ಎಂದು ವಕೀಲ ಮಂಜುನಾಥ್ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಭಾರೀ ಕುತೂಹಲ ಸೃಷ್ಟಿಸಿದೆ. ಸದ್ಯ, ಅಗೆಯುವ ಸಂದರ್ಭದಲ್ಲಿ ಲಭ್ಯವಾದ ಈ ಐಡಿ ಕಾರ್ಡ್ಗಳ ಕುರಿತು ಎಸ್ಐಟಿ ತಂಡ ತನಿಖೆ ಚುರುಕುಗೊಳಿಸಿದೆ.
ಗುರುತಿಸಬಹುದಾದ ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ಗಳ ಪತ್ತೆ (ಒಂದರಲ್ಲಿ ಪುರುಷರ ಹೆಸರು, ಮತ್ತೊಂದರಲ್ಲಿ ಮಹಿಳೆಯ ಹೆಸರು “ಲಕ್ಷ್ಮಿ”) ಮುಂದಿನ ತನಿಖೆಗೆ ಹೊಸ ದಾರಿಯನ್ನು ಒದಗಿಸುತ್ತದೆ. ನಾವು SIT ಈ ಪ್ರಮುಖ ಸುಳಿವುಗಳನ್ನು ಗಂಭೀರವಾಗಿ ಹಾಗೂ ತ್ವರಿತವಾಗಿ ಅನುಸರಿಸುವುದಾಗಿ ನಂಬಿದ್ದೇವೆ ಅಂತ ವಕೀಲ ಮಂಜುನಾಥ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೇಳಿಕೆಯಲ್ಲಿ ಏನಿದೆ?: ಸೈಟ್ ಸಂಖ್ಯೆ 1 ರಲ್ಲಿ ಸುಮಾರು 2.5 ಅಡಿ ಆಳದಲ್ಲಿ ಹರಿದ ಕೆಂಪು ರವಿಕೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್ ಪತ್ತೆಯಾಗಿದೆ. ಒಂದು ಕಾರ್ಡ್ನಲ್ಲಿ ಪುರುಷನ ಹೆಸರು ಇದ್ದರೆ ಇನ್ನೊಂದು ಕಾರ್ಡ್ನಲ್ಲಿ ಲಕ್ಷ್ಮಿ ಎಂಬ ಮಹಿಳೆಯ ಹೆಸರು ಇದೆ. ಸಾಕ್ಷ್ಯಗಳು ಸಿಕ್ಕಿದ ಕಾರಣ ನಮಗೆ ಹೊಸ ಭರವಸೆ ಮೂಡಿದೆ. ನಾವು ಎಸ್ಐಟಿ ಅವರ ಕೆಲಸದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ. ವಿಶೇಷ ತನಿಖಾ ತಂಡ ಶ್ಲಾಘನೀಯ ಕೆಲಸ ಮಾಡುತ್ತಿದೆ.





