ಬೆಂಗಳೂರಿನ ಮಾಲ್ಗಳು ಹಾಗೂ ಅಂಗಡಿಗಳಲ್ಲಿ ಕನ್ನಡ ನಾಮಫಲಕಗಳಿಲ್ಲದ ಕಾರಣ ಕನ್ನಡ ಜಾಗೃತಿ ಅಭಿಯಾನವನ್ನು ಕನ್ನಡ ರಕ್ಷಣಾ ವೇದಿಕೆ ಸೇರಿ ಹಲವಾರು ಕನ್ನಡ ಪರ ಸಂಘಟನೆಗಳು ನಡೆಸಿದ್ದವು. ಈ ಅಭಿಯಾನದಡಿಯಲ್ಲಿ ಕನ್ನಡದಲ್ಲಿ ನಾಮಫಲಕಗಳನ್ನು ಹಾಕದ ಅಂಗಡಿಗಳ ಇಂಗ್ಲಿಷ್ ಬೋರ್ಡ್ಗಳನ್ನು ಒಡೆದು ಪ್ರತಿಭಟನೆಯನ್ನು ನಡೆಸಲಾಯಿತು.
ಈ ಕಾರಣಕ್ಕಾಗಿ ಕರವೇ ಅಧ್ಯಕ್ಷ ನಾರಾಯಣಗೌಡ ಹಾಗೂ ಅನೇಕ ಸದಸ್ಯರುಗಳನ್ನು ಪೊಲೀಸರು ಬಂಧಿಸಿದ್ದರು. ನಾರಾಯಣ ಗೌಡ ಅವರನ್ನು ಬಿಡುಗಡೆ ಮಾಡಬೇಕು ಎಂದೂ ಸಹ ಪ್ರತಿಭಟನೆಗಳು ನಡೆದಿದ್ದವು. ಆದರೆ ಘಟನೆ ನಡೆದು ಮೂರ್ನಾಲ್ಕು ದಿನಗಳು ಕಳೆದರೂ ಸಹ ನಾರಾಯಣಗೌಡಗೆ ಬಿಡುಗಡೆ ಭಾಗ್ಯ ದೊರಕದೇ ಇದ್ದು, ಇಂದಿನ ಕೋರ್ಟ್ ವಿಚಾರಣೆ ಬಳಿಕ ಸಹ ಜಾಮೀನು ಸಿಗದೇ ಆದೇಶ ಮುಂದೂಡಲ್ಪಟ್ಟಿದೆ.
ಇಂದು ( ಜನವರಿ 2 ) ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೇವನಹಳ್ಳಿಯ 5ನೇ ಹೆಚ್ಚುವರಿ ಸೆಷನ್ ಕೋರ್ಟ್ ಆದೇಶವನ್ನು ಕಾಯ್ದಿರಿಸಿದ್ದು, ಜನವರಿ 6ರಂದು ಜಾಮೀನು ಬಗ್ಗೆ ಆದೇಶ ಪ್ರಕಟಿಸಲಿದೆ. ಹೀಗಾಗಿ ಇನ್ನೂ ನಾಲ್ಕು ದಿನಗಳ ಕಾಲ ನಾರಾಯಣಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರಲಿದ್ದಾರೆ. ನಾರಾಯಣಗೌಡ ಜತೆಗೆ 32 ಕರವೇ ಕಾರ್ಯಕರ್ತರ ಬಂಧನ ಕೂಡ ಆಗಿದೆ.