Mysore
34
broken clouds

Social Media

ಬುಧವಾರ, 22 ಏಪ್ರಿಲ 2026
Light
Dark

ಲಂಚಕ್ಕೆ ಬೇಡಿಕೆ : ಪಿಎಸ್ಐ ಚೇತನ್ ಲೋಕಾ ಬಲೆಗೆ

ತುಮಕೂರು : ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ತೋ ಮಾಡಿಕೊಂಡು ಠಾಣೆಗೆ ತಂದಿದ್ದ ಕಾರನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟು 40 ಸಾವಿರ ರೂ.ಗಳನ್ನು ಬೇರೊಬ್ಬರ ಮೂಲಕ ಪಡೆಯುತ್ತಿದ್ದ ಗ್ರಾಮಾಂತರ ಠಾಣೆಯ ಪಿಎಸ್‌ಐ ಚೇತನ್‌ಕುಮಾರ್ ಎಸ್.ಎಸ್.ಅವರನ್ನು ಶನಿವಾರ ಮುಂಜಾನೆ ತುಮಕೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಎಸ್.ಕೆ.ನಾಗೇಶ್ ಎನ್ನುವವರು ಜ.17 ರಂದು ವಾರಾಂತ್ಯದಲ್ಲಿ ತಿರುಗಾಡಲು ಹೊರಗಡೆ ಹೋಗಿದ್ದರು. ಈ ಸಂದರ್ಭದಲ್ಲಿ ತಾಲ್ಲೂಕಿನ ಕೆಸರುಮಡು ಗ್ರಾಮದಲ್ಲಿ ತಮ್ಮ ಕಿಯಾ ಕಾರನ್ನು ರಸ್ತೆ ಬದಿ ಟೀ ಕುಡಿಯಲು ನಿಲ್ಲಿಸಿದಾಗ ತುಮಕೂರು ಗ್ರಾಮಾಂತರ ಠಾಣೆಯ ಪಿಎಸ್‌ಐ ಚೇತನ್‌ಕುಮಾರ್ ಎಸ್.ಎಸ್ ಅವರು ಕಾರನ್ನು ತೋ ಮಾಡಿಕೊಂಡು ಹೋಗಿ ತಮ್ಮ ಠಾಣೆಯ ಆವರಣದಲ್ಲಿ ನಿಲ್ಲಿಸಿಕೊಂಡಿದ್ದರು.

ಪಿರ್ಯಾದಿ ನಾಗೇಶ್ ಅವರು ಪಿಎಸ್‌ಐ ಚೇತನ್‌ಕುಮಾರ್ ಅವರನ್ನು ಕಾರನ್ನು ಬಿಡಲು ಕೇಳಿಕೊಂಡಾಗ ಐದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಕೊಡಲಾಗದಿದ್ದರೆ ಗಾಂಜಾ ಸೇವೆನೆ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದರು. ಕೊನೆಗೆ 40 ಸಾವಿರ ರೂ. ಹಣ ನೀಡುವಂತೆ ಪಿರ್ಯಾದಿಗೆ ಪಿಎಸ್‌ಐ ತಾಕೀತು ಮಾಡಿದ್ದರು. ಹಣ ಕೊಡಲೊಪ್ಪದ ಪಿರ್ಯಾದಿ ಎಸ್.ಕೆ.ನಾಗೇಶ್ ಶುಕ್ರವಾರ ಲೋಕಾಯುಕ್ತ ಮೊರೆ ಹೋಗಿದ್ದರು. ಶುಕ್ರವಾರ ಸಂಜೆ ಪೂರ್ವನಿಗದಿಯಂತೆ ಲಂಚದ ಹಣವನ್ನು ಕ್ಯಾತ್ಸಂದ್ರ ಬಳಿಯ ಟೋಲ್ ಬಳಿಯ ನಮಸ್ತೆ ತುಮಕೂರು ಕ್ಯಾಷಿಯರ್ ಸಪ್ದರ್ ಆಲಿಖಾನ್‌ಗೆ ನಾಗೇಶ್ ಹಣ ನೀಡುತ್ತಿರುವಾಗ ಲೋಕಾಯುಕ್ತ ಪೊಲೀಸರು ಕ್ಯಾಷಿಯರ್ ಆಲಿಖಾನ್ ಮತ್ತು ಲಂಚದ ಹಣವನ್ನು ವಶಕ್ಕೆ ಪಡೆದು, ಶನಿವಾರ ನಸುಕಿನ ಎರಡು ಗಂಟೆಯಲ್ಲಿ ಪಿಎಸ್‌ಐ ಚೇತನ್ ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡು ಪ್ರಕ್ರಿಯೆಗಳನ್ನು ಮುಗಿಸಿದ್ದರು.

ಶನಿವಾರ ನ್ಯಾಯಾಲಯದ ಮುಂದೆ ಆರೋಪಿ ಚೇತನ್‌ಕುಮಾರ್ ಅವರನ್ನು ಹಾಜರುಪಡಿಸಿದ್ದು,ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಲೋಕಾಯುಕ್ತ ಪೊಲೀಸ್ ಅಧಿಕ್ಷಕ ಲಕ್ಷ್ಮೀನಾರಾಯಣ.ಎ.ವಿ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧಿಕ್ಷಕ ಮಂಜುನಾಥ.ಎಂ ಮತ್ತು ಡಾ.ಕೆ.ಎಂ.ಸಂತೋಷ್ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಕೆ.ಸುರೇಶ, ಬಿ.ಮೊಹಮ್ಮದ್ ಸಲೀಂ ಮತ್ತು ರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Tags:
error: Content is protected !!