ಬೆಂಗಳೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಿರ್ಲಕ್ಷ್ಯದಿಂದ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನವಜಾತ ಶಿಶುಗಳು ಹಾಗೂ ಬಾಣಂತಿಯರ ಸಾವು ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ರಾಜ್ಯ ಬಿಜೆಪಿ ಸಚಿವರನ್ನು ತರಾಟೆಗೆ ತೆಗೆದುಕೊಂಡಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಬಳ್ಳಾರಿ, ದಾವಣಗೆರೆ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆ ಹೆಚ್ಚಿದೆ. ಇದರ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ವಹಿಸದ ಕಾರಣ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆಗಳು ಹೆಚಾಗುತ್ತಿವೆ ಎಂದು ದೂರಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಣಿ ಸಾವುಗಳು ಸಂಭವಿಸುತ್ತಿದ್ದರು ಘಟನೆ ಕುರಿತು ವರದಿ ಪಡೆದರೆ ಸಾಲದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿ ಅತ್ಯಾಧುನಿಕ ಸೌಲಭ್ಯ ಓದಗಿಸಿ, ಜನರ ಪ್ರಾಣ ಉಳಿಸುವ ಮುಖಾಂತರ ತಮ್ಮ ಸಾಮಾಜಿಕ ಕಳಕಳಿಯ ಬದ್ದತೆಯನ್ನು ಸಾಬೀತು ಮಾಡಿ. ಹಾಗೆಯೇ ಇಲಾಖೆಗೂ ತಮಗೂ ಸಂಬಂಧವಿಲ್ಲದಂತಿರುವ ಆರೋಗ್ಯ ಸಚಿವರಿಗೆ ಜವಬ್ದಾರಿ, ಕರ್ತವ್ಯದ ಪಾಠಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಚುಚ್ಚಿದೆ.
ಬಳ್ಳಾರಿ ಜಿಲ್ಲಾಸ್ಪತ್ರೆಯ ಐವರ ಬಾಣಂತಿಯರ ಸಾವು, ದಾವಣಗೆರೆ, ಬೆಳಗಾವಿ, ಬೆಂಗಳೂರಿನ ಆಸ್ಪತ್ರೆಯಲ್ಲಿ ಹಸುಗೂಸುಗಳ ಸರಣಿ ಸಾವಾಗಿದ್ದರೂ, ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ಸರ್ಕಾರ ಅಮಾಯಕ ಜನರ ಜೀವನದ ಆರೋಗ್ಯದ ಜೊತೆಯಲ್ಲಿ ಚೆಲ್ಲಾಟ ಆಡುತ್ತಿದೆ ಎಂದು ಕಟುವಾಗಿ ಟೀಕಿಸಿದರು.