ಬೆಳಗಾವಿ: ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿನ ಬಾಣಂತಿಯರ ಸಾವಿನ ನಿಜಾಂಶಗಳ ಬಗ್ಗೆ ನಾವು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಆದರೆ ವಿಪಕ್ಷಗಳು ಸಾವು ಮುಂದಿಟ್ಟುಕೊಂಡು ರಾಜಕೀಯ ಮಾಡಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಭಾಗವಹಿಸುವ ಮುನ್ನ ಮಾದ್ಯಮಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷವೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿ, ನವಜಾತ ಶಿಶುಗಳು ಮರಣ ಇದ್ದದ್ದೆ. ಇದಕ್ಕೆ ಅಪೌಷ್ಠಿಕತೆ, ನ್ಯೂಮೋನಿಯಾ, ಅವಧಿಪೂರ್ವ ಹೆರಿಗೆ, ವೈದ್ಯಕೀಯ ಸೌಲಭ್ಯಗಳ ವಿಫಲತೆ ಕೂಡ ಇರಬಹುದು. ಇದನ್ನೆ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ತಮ್ಮ ರಾಜಕೀಯ ಮಾಡಬಾರದು ಎಂದು ಹೇಳಿದರು.
ಅಧಿವೇಶನದಲ್ಲಿ ಬಾಣಂತಿಯರ ಸಾವು ಕುರಿತು ಗಂಭಿರ ಚರ್ಚೆ ಆಗಬೇಕು. ನಾವು ಸಹ ಚರ್ಚೆಗೆ ಸಿದ್ಧವಿದ್ದೇವೆ. ನಿಜಾಂಶಗಳ ಕುರಿತು ಅಧಿವೇಶನದಲ್ಲಿ ಬೆಳಕು ಚೆಲ್ಲುತ್ತೇವೆ. ಬಾಣಂತಿಯರ ಮರಣದ ವಿಷಯದಲ್ಲಿ ಸಂಪೂರ್ಣವಾಗಿ ವೈದ್ಯಕೀಯ ವಿಫಲತೆಯಿದೆ ಎಂದು ವಿಪಕ್ಷಗಳು ರಾಜಕೀಯ ಮಾಡಬಾರದು ಎಂದರು.
ಬಳ್ಳಾರಿ ಸರ್ಕಾರಿ ಆಸ್ಪತ್ರೆಯ ಬಾಣಂತಿಯರ ಮರಣದ ವಿಚಾರವಾಗಿ ನಮಗೆ ತುಂಬಾ ನೋವಾಗಿದೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾವಿಗೆ ನಿಖರ ಕಾರಣ ತಿಳಿಯಲು ಕಮಿಟಿ ರಚಿಸಿ ವಿಚಾರಣೆ ಮಾಡಲಾಗುತ್ತಿದೆ. ಈ ಬಗ್ಗೆ ಎಸ್ಐಟಿ ರಚನೆಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿನ ನಿರ್ಲಕ್ಷ್ಯದಿಂದ ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರಾ ಎನ್ನುವ ಪ್ರಶ್ನೆಗೆ, ಹಾಗೇನಿಲ್ಲವಲ್ಲ ಎಂದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ ಮುಂದಿನ ದಿನಗಳಲ್ಲಿ ನೇಮಕಾತಿಗೆ ಆದೇಶ ಹೊರಡಿಸಲಾಗುವುದು ಎಂದರು.