ಬೆಳಗಾವಿ: ನಮ್ಮ ಪಕ್ಷದಲ್ಲಿ ನಾನು ಯಾರೊಂದಿಗೂ ಭಿನ್ನಾಭಿಪ್ರಾಯವನ್ನಿಟ್ಟುಕೊಂಡಿಲ್ಲ. ಪಕ್ಷದ ಚೌಕಟ್ಟಿನಲ್ಲಿ ಶಿಸ್ತಿನಿಂದ ಯಾವುದೇ ಸಚಿವರು ಅಥವಾ ಶಾಸಕರು ಕೆಲಸ ಮಾಡಿದರೂ, ಅವರಿಗೆ ನಾನು ತಲೆಬಾಗಿ ಸೇವೆ ಮಾಡುತ್ತೇನೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು(ಜನವರಿ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಲ್ ಡರ್ಟಿ ಪಾಲಿಟಿಕ್ಸ್ ವಿಚಾರವಾಗಿ ಕೇಳುವುದಾದರೆ ನನ್ನೊಂದಿಗೆ ಮಾತನಾಡಬೇಡಿ. ನಮ್ಮ ಪಕ್ಷ ನನಗೆ ಮುಖ್ಯವಾಗಿದೆ. ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಹೀಗಾಗಿ ರಾಜ್ಯದಲ್ಲಿ ಏನೇ ನಡೆದರೂ, ಅನಗತ್ಯವಾಗಿ ನನ್ನ ಹೆಸರನ್ನು ಎಳೆದು ತರಬೇಡಿ ಎಂದು ಹೇಳಿದರು.
ಇನ್ನೂ ಕೆಪಿಸಿಸಿ ಅಧ್ಯಕ್ಷನಾಗಿ ಪಕ್ಷವನ್ನು ಸಂಘಟಿಸುವುದು, ಸರ್ಕಾರವನ್ನು ಭದ್ರವಾಗಿಡುವುದು ಹಾಗೂ ಕಾರ್ಯಕರ್ತರನ್ನು ರಕ್ಷಿಸುವುದಷ್ಟೇ ನನ್ನ ಕೆಲಸವಾಗಿದೆ. ಪಕ್ಷಕ್ಕಾಗಿ ನಾನು ಎಂದಿಗೂ ತ್ಯಾಗ ಮಾಡುತ್ತ ಬಂದಿದ್ದೇನೆ. ಅಲ್ಲದೇ ಈ ಹಿಂದೆ ಧರ್ಮಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ದಿನದಿಂದ ಇಲ್ಲಿಯವರೆಗೂ ನಾನು ಪಕ್ಷಕ್ಕಾಗಿ ತ್ಯಾಗ ಮಾಡುತ್ತ ಬಂದಿರುವೆ. ನಮ್ಮ ಪಕ್ಷವಷ್ಟೇ ನನಗೆ ಮುಖ್ಯ, ಅದರಿಂದ ಸಾರ್ವಜನಿಕರಿಗೆ ಒಳ್ಳೆಯದಾದರೆ ಸಾಕು ಎಂದರು.