ಉಡುಪಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸ್ಯಾಂಡಲ್ವುಡ್ ಕಲಾವಿದರಿಗೆ ವಾರ್ನಿಂಗ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಜಕೀಯ ನಾಯಕರು, ನಟ ಮತ್ತು ನಟಿಯರ ಪರ-ವಿರೋಧ ವ್ಯಕ್ತವಾದ ಬೆನ್ನಲ್ಲೇ ಡಿಕೆಶಿ ಅವರು ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿ ಇಂದು(ಮಾರ್ಚ್.2) ಈ ಕುರಿತು ಮಾಧ್ಯಮಗಳೊಂದಗೆ ಪ್ರತಿಕ್ರಿಯೆ ನೀಡಿದ ಅವರು, ನಟರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ನನಗೆ ಗೊತ್ತಿರುವಷ್ಟು ಸತ್ಯ ನಾನು ಹೇಳಿದ್ದೇನೆ. ಕಲಾವಿದರು ಬೇಕಾದರೆ ಹೋರಾಟ ಮಾಡಲಿ, ಮೇಕೆದಾಟು ಯಾತ್ರೆ ಮಾಡುವಾಗ ಯಾರು ಬಂದಿರಲಿಲ್ಲ. ಅದನ್ನೇ ನಾನು ನಿನ್ನೆ ಹೇಳಿದ್ದು, ಫಿಲ್ಮ್ ಫೆಸ್ಟಿವಲ್ ಏನೂ ನನ್ನ ಕಾರ್ಯಕ್ರಮನಾ? ಎಂದು ತಮ್ಮ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗಳಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಮುನಿರತ್ನ, ನಟಿ ತಾರಾ ಅನುರಾಧ, ನಿರ್ದೇಶಕ ಟಿ.ಎಸ್.ನಾಗಾಭರಣ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಡಿಕೆಶಿ ಅವರ ಹೇಳಿಕೆಗಳನ್ನು ಶಾಸಕ ಗಣಿಗ ರವಿ, ನಿರ್ಮಾಪಕ ಕೆ.ಮಂಜು ಹಾಗೂ ನಟಿ ಹೇಮಾ ಚೌಧರಿ ಅವರು ಸರ್ಮಥನೆ ಮಾಡಿಕೊಂಡಿದ್ದರು.





