ಬೆಂಗಳೂರು: ಕನ್ನಡದ ಕೊಡಗಿನ ಮೂಲದವರಾದ ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಅವರ ವಿರುದ್ಧ ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಅವರು ಕುಹುಕವಾಡಿದ್ದರು.
ಸದ್ಯ ಈ ವಿಚಾರದಲ್ಲಿ ರಶ್ಮಿಕ ಪರ ನಿಂತಿರುವ ಕೊಡವ ನ್ಯಾಷನಲ್ ಸಂಘಟನೆ ಕಳೆದ ವಾರವಷ್ಟೆ ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯಕ್ಕೆ ಶಾಸಕರ ವಿರುದ್ಧ ದೂರು ದಾಖಲಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿ ಶಾಸಕ ರವಿಕುಮಾರ್ ರಶ್ಮಿಕಾ ಮಂದಣ್ಣ ವಿಚಾರದಲ್ಲಿ ತಲೆಹಾಕಿರುವ ಕೊಡವ ನ್ಯಾಷನಲ್ ಸಂಘಟನೆ ಅಧ್ಯಕ್ಯ ನಾಚಪ್ಪ ಪ್ರಚಾರ ಪಡ್ಕೊತ್ತಿದ್ದಾರೆ ಎಂದು ಟೀಕಿಸಿದ್ದರು.
ಇದೀಗ, ಅಧ್ಯಕ್ಷ ನಾಚಪ್ಪ ಶಾಸಕ ರವಿಕುಮಾರ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಶಾಸಕ ರವಿಕುಮಾರ್ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರಶ್ಮಿಕಾ ಮಂದಣ್ಣ ಅತಿ ಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗದಿಂದ ಬಂದವರು. ಇದೀಗ ತನ್ನ ಪರಿಶ್ರಮದಿಂದ ಅವರು ಬಹುಭಾಷ ನಟಿಯಾಗಿದ್ದಾರೆ. ಆದರೆ, ಶಾಸಕ ರವಿಕುಮಾರ್ ಅವರು ರಶ್ಮಿಕಾ ಅವರು ಹೆಸರು ಪ್ರಸ್ತಾಪಿಸಿ ಅನಗತ್ಯ ವಿವಾದ ಸೃಷ್ಟಿ ಮಾಡ್ತಿದ್ದಾರೆ. ಅಲ್ಲದೇ ಅವರನ್ನು ಬೆದರಿಸುವ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆ ಮಾಡ್ತಿದ್ದಾರೆ. ಹೀಗಾಗಿ ಶಾಸಕರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.
ಅಷ್ಟೆ ಅಲ್ಲದೇ, ಮಹಿಳಾ ಆಯೋಗದ ಮಾಜಿ ಸದಸ್ಯೆ ಖುಷ್ಬೂ ಅವರಿಗೂ ಈ ಕುರಿತು ಸಂದೇಶ ರವಾನಿಸಿದ್ದಾರೆ. ಸದ್ಯ ಈ ವಿಚಾರವನ್ನು ಆಯೋಗ ಕೈಗೆತ್ತಿಕೊಂಡರೆ ಶಾಸಕ ರವಿಕುಮಾರ್ ಅವರಿಂದ ಸ್ಪಷ್ಟನೆ ಕೇಳಬಹುದು ಎನ್ನಲಾಗಿದೆ.





