ಸಾರ್ಥಕ ಸೇವೆಯ ಸಮರ್ಪಣೆ ಸಮಾವೇಶದಲ್ಲಿ ಡಿಸಿಎಂ ವಿಶ್ವಾಸ
ತುಮಕೂರು: 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ. ಜನತಾದಳ ಹಾಗೂ ಬಿಜೆಪಿಯವರು ಇದನ್ನು ಬರೆದಿಟ್ಟುಕೊಳ್ಳಿ. ಜನರು ಕೂಡ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮಂಗಳವಾರ ನಡೆದ ’ಸಾರ್ಥಕ ಸೇವೆಯ ಸಮರ್ಪಣೆ’ ಸಮಾವೇಶದಲ್ಲಿ ಶಿವಕುಮಾರ್ ಅವರು ಮಾತನಾಡಿದರು.
‘ನಿಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರ ಬದುಕಿನಲ್ಲಿ ಬದಲಾವಣೆ ತಂದಿದೆ. ಇಡೀ ದೇಶಕ್ಕೆ ಒಂದು ಮಾದರಿ ಸರ್ಕಾರವನ್ನು ಕೊಟ್ಟಿದೆ, ಅದನ್ನು ಉಳಿಸಿಕೊಂಡು ಹೋಗುತ್ತೇವೆ. ನಿಮ್ಮ ಆಶೀರ್ವಾದ ಸದಾ ಇರಲಿ. ಪರಿಶ್ರಮ ಇದ್ದ ಕಡೆ ಇತಿಹಾಸ ಸೃಷ್ಟಿ ಆಗುತ್ತದೆ. ನಂಬಿಕೆ ಇದ್ದ ಕಡೆ ಅದ್ಭುತಗಳು ನಡೆಯುತ್ತವೆ. ಸತ್ಯ ಇದ್ದ ಕಡೆ ಗೆಲುವು ಇದ್ದೇ ಇರುತ್ತದೆ‘ ಎಂದು ಹೇಳಿದರು.
‘ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದವರು ನಡೆಸಿದ ಅಧ್ಯಯನದ ಪ್ರಕಾರ, ಕರ್ನಾಟಕದ ಪಂಚ ಗ್ಯಾರಂಟಿಗಳು ಇಡೀ ವಿಶ್ವದಲ್ಲೇ ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆಯನ್ನು ತಂದಂತಹ ಕಾರ್ಯಕ್ರಮಗಳಾಗಿವೆ. ಇವು ವಿಶ್ವಕ್ಕೆ ಒಂದು ಮಾದರಿ‘ ಎಂದರು.
ಎಲ್ಲಾ ರಾಜ್ಯಗಳು ಗ್ಯಾರಂಟಿ ಮಾದರಿ ಅನುಸರಿಸುತ್ತಿವೆ
ನಮ್ಮ ಬಿಜೆಪಿ ಸ್ನೇಹಿತರುಗಳು, ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆಗಳ ಸುರಿಮಳೆಯನ್ನೇ ಮಾಡಿದರು. ಇವತ್ತು ಪ್ರತಿಯೊಂದು ರಾಜ್ಯದಲ್ಲೂ ಅವರೇ ಗ್ಯಾರಂಟಿ ಯೋಜನೆ ಪ್ರಕಟಿಸುತ್ತಿದ್ದಾರೆ. ಯಾವುದೇ ಪಕ್ಷವೂ ಇದಕ್ಕೆ ಹೊರತಾಗಿಲ್ಲ. ಗ್ಯಾರಂಟಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡುತ್ತಿದ್ದಾರೆ ಎಂದರು.
ನಾವು ಅಂದು ಜನಸಾಮಾನ್ಯರ ಜೀವನ ಉಳಿಯಬೇಕು ಎಂದು ಬದ್ದತೆಯಿಂದ ಕೆಲಸ ಮಾಡಿದೆವು. ಈಗ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಹೋಗುತ್ತಿದೆ. ಆದಾಯ ಪಾತಳಕ್ಕೆ ಇಳಿದಿದೆ. ಇಂತಹದಕ್ಕೆ ಸಹಾಯ ಮಾಡಬೇಕು ಅಂತಲೇ ನಾವು ಗ್ಯಾರಂಟಿ ಯೋಜನೆಗಳನ್ನು ಪ್ರಾರಂಭ ಮಾಡಿದೆವು. ಈಗ ವಿರೋಧ ಪಕ್ಷಗಳು ಸಹ ನಮ್ಮ ಜನಪರ ಗ್ಯಾರಂಟಿ ಮಾದರಿಯನ್ನೇ ಅನುಸರಿಸುತ್ತಿವೆ ಎಂದರು.
ಇತ್ತೀಚೆಗೆ ನಾನು, ಸಿದ್ದರಾಮಯ್ಯನವರು ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತದಲ್ಲಿ ಸತ್ತಂತ ಜನರ ಕುಟುಂಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಿದ್ದೇವೆ. ಶರಣಪ್ರಕಾಶ್ ಪಾಟೀಲರು, ಜಿಲ್ಲಾ ಮಂತ್ರಿಗಳಾದ ವೆಂಕಟೇಶ್ ರವರ ಸಹಕಾರದಿಂದ ಇಡೀ ರಾಜ್ಯದಲ್ಲಿ ಒಂದು ಇತಿಹಾಸವನ್ನು ಸೃಷ್ಟಿ ಮಾಡಿದ್ದೇವೆ‘ ಎಂದರು.
‘ಕಾಂಗ್ರೆಸ್ ಸರ್ಕಾರ ಜನರ ಬದುಕಿನಲ್ಲಿ ಬದಲಾವಣೆಯನ್ನು ತಂದೇ ತರುತ್ತದೆ ಎನ್ನುವ ನಂಬಿಕೆಯಿಂದ ೧೩೬ ಜನ ಶಾಸಕರನ್ನು ಆಯ್ಕೆ ಮಾಡಿದ್ದೀರಿ. ತುಮಕೂರು ಜಿಲ್ಲೆಯಲ್ಲಿ ಏಳು ಜನ ಶಾಸಕರನ್ನು ಕೊಟ್ಟ ನಿಮ್ಮ ಋಣವನ್ನು ತೀರಿಸಲಿಕ್ಕೆ ಒಂದು ದೊಡ್ಡ ಅವಕಾಶವನ್ನು ನೀಡಿದ್ದೀರಿ‘ ಎಂದರು.
ಕೊಟ್ಟ ಕುದುರೆ ಏರಲು ಆಗದ ಕುಮಾರಸ್ವಾಮಿ
‘ಮೊನ್ನೆ ತಾನೆ ಕುಮಾರಸ್ವಾಮಿಯವರು ಬೆಂಗಳೂರು ನಗರದಲ್ಲಿ ಬಿ ಖಾತೆಯಿಂದ ಎ ಖಾತೆ ಮಾಡಿಸಬೇಡಿ, ನಮ್ಮ ಸರ್ಕಾರ ಬಂದು ಬಿಡುತ್ತದೆ. ನೀವು ಯಾರೂ ದುಡ್ಡು ಕೊಡಲು ಹೋಗಬೇಡಿ. ನಾವು ಮಾಡುತ್ತೇವೆ ಎಂದು ಮಾತಾಡಿದ್ದಾರೆ. ಅದಕ್ಕೆ ಹಿಂದೆಯೇ ನಾನು ಉತ್ತರ ನೀಡಿದ್ದೆ. ಕೊಟ್ಟ ಕುದುರೆಯನ್ನು ಏರಲು ಆಗದವನು ವೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರ ಕೊಟ್ಟಾಗ ನಿಮಗೇನೂ ಮಾಡುವುದಕ್ಕೆ ಆಗಲಿಲ್ಲ. ಅಧಿಕಾರ ಇಲ್ಲದೆ ಹೋದಾಗ ಬರೀ ಹದಿನೇಳು ಜನರನ್ನು ಇಟ್ಟುಕೊಂಡು ಹರಿತೀನಿ, ಹರಿತೀನಿ, ಹರಿತೀನಿ ಅಂದ್ರೆ, ನಿಮ್ಮ ಕೈಯಲ್ಲಿ ಏನೂ ಮಾಡಲಿಕ್ಕೆ ಸಾಧ್ಯ ಇಲ್ಲ. ನಿಮ್ಮ ಶಾಸಕರು ವಿಧಾನಸಭೆಯಲ್ಲಿ ಬಡವರ ಬಗ್ಗೆ ಒಂದಿನವೂ ಮಾತಾಡಿಲ್ಲ. ನಿಮ್ಮಲ್ಲಿರುವಂತಹ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ನಿಮ್ಮ ಹತ್ತಿರ ಸಮಯ ಇಲ್ಲ. ಇನ್ನು ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಮಾತಾಡುವುದು ಬೇಡ‘ ಎಂದು ವಾಗ್ದಾಳಿ ನಡೆಸಿದರು.
ಎರಡನೇ ಬೆಂಗಳೂರಾಗಿ ತುಮಕೂರು ಅಭಿವೃದ್ಧಿ
‘ಬೆಂಗಳೂರು ಬಿಟ್ಟರೆ ತುಮಕೂರಿಗೆ ಒಂದು ದೊಡ್ಡ ಇತಿಹಾಸ. ಶಿಕ್ಷಣ ಕಾಶಿ, ಕಲ್ಪತರು ನಾಡು, ಧಾರ್ಮಿಕ, ಐತಿಹಾಸಿಕ, ದಕ್ಷಿಣದ ಕಾಶಿಯಂತೆ ಕಂಗೊಳಿಸುತ್ತಿದೆ. ಅನ್ನ, ಅಕ್ಷರ, ಆಶ್ರಯ ನೀಡಿದಂತಹ ಒಂದು ಪವಿತ್ರವಾದಂತಹ ಭೂಮಿ. ಸಹೋದ್ಯೋಗಿ ಪರಮೇಶ್ವರ್ ಅವರು, ಬೆಂಗಳೂರಿನ ಜನಸಂಖ್ಯೆ ನಿಯಂತ್ರಣ ಮಾಡಬೇಕಾದರೆ ಇರುವುದು ಒಂದೇ ಉಪಾಯ ಉತ್ತರ ಭಾಗದಲ್ಲಿ ಇರುವ ತುಮಕೂರನ್ನು ಎರಡನೇ ಬೆಂಗಳೂರಾಗಿ ಪರಿವರ್ತನೆ ಮಾಡಬೇಕು ಎಂದಿದ್ದಾರೆ‘ ಎಂದರು.




