ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಅದು ಇನ್ನು 3 ತಿಂಗಳು, 6 ತಿಂಗಳು ಅಥವಾ ಒಂದು ವರ್ಷ ಅಧಿಕಾರದಲ್ಲಿರುತ್ತದೋ ಇಲ್ಲವೋ ಅಂತ ಕುಮಾರಸ್ವಾಮಿಯವರು ಹೇಳಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ನೂತನ ಸಂಸದರಿಗೆ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದಾರೆ, ಪೆಟ್ರೋಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ಸರ್ಕಾರ ಜನರನ್ನು ವಂಚಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಒಂದಾಗಿರೋದು ಕಾಂಗ್ರೆಸ್ ನಾಯಕರ ನಿದ್ದೆ ಹಾಳುಮಾಡಿದೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರದಿಂದ ನಾನು ಸೋಲುತ್ತೇನೆ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದರು. ಆದರೆ ಕ್ಷೇತ್ರದ ಬುದ್ಧಿಜೀವಿಗಳು, ಬಡವರು ಮತ್ತು ಕಡುಬಡುವರು ನನ್ನನ್ನ ಕೈಹಿಡಿದರು ಮತ್ತು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಸಂಘಟಿತ ಪರಿಶ್ರಮದಿಂದ ನಾನು ಗೆಲ್ಲುವುದು ಸಾಧ್ಯವಾಯಿತು. ಕನಿಷ್ಟ 15 ಸೀಟು ಗೆಲ್ಲುತ್ತೇವೆ ಎಂದಿದ್ದ ಕಾಂಗ್ರೆಸ್ ಕೇವಲ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು 19ಸೀಟುಗಳನ್ನು ಗೆದ್ದಿತು ಎಂದು ಹೇಳಿದರು.