Mysore
21
overcast clouds
Light
Dark

ವಾಲ್ಮೀಕಿ ನಿಗಮದಲ್ಲಿ ಅಕ್ರಮ ನಡೆದಿರುವುದು ನಿಜ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವುದು ನಿಜ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆ ಮೂಲಕ ತಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

ಈ ಸಂಬಂಧ ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸದ್ಯ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮಕ್ಕೆ ನಾನು ಸಚಿವ. ಸಚಿವ ನಾಗೇಂದ್ರ ರಾಜೀನಾಮೆ ಬಳಿಕ ಈ ಖಾತೆಯನ್ನು ನಾನೇ ಉಳಿಸಿಕೊಂಡಿದ್ದೇನೆ. ನಿಗಮದಲ್ಲಿ ಅಕ್ರಮ ನಡೆದಿದೆ, ಆದರೆ ಯಾರು ಮಾಡಿದ್ದು, ಇದಕ್ಕೆ ಯಾರು ಜವಾಬ್ದಾರಿ ಎಂಬೆಲ್ಲಾ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಿಗಮದ ಹಣಕಾಸು ಜವಾಬ್ದಾರಿ ನಿಭಾಯಿಸುವುದು ನಿಗಮದ ಎಂಡಿ ಕೆಲಸವಾಗಿದೆ. ಹಣದ ಸಂಪೂರ್ಣ ಜವಾಬ್ದಾರಿ ಎಂಡಿ ಅವರದ್ದೇ ಆಗಿರುತ್ತದೆ. ಎಂಡಿ ನಿಗಮದ ಹೆಡ್‌ ಆಗಿರುತ್ತಾರೆ. ಮಿನಿಸ್ಟರ್‌ ಕೇವಲ ಪಾಲಿಸಿ ಮೇಕರ್ಸ್‌ ಆಗಿರುತ್ತಾರೆ. ಇದಕ್ಕೆ ಮಿನಿಸ್ಟರ್‌ ನಾಗೇಂದ್ರ ಹಾಗೂ ಅಧ್ಯಕ್ಷರಾಗಿ ದದ್ದಲ್‌ ಅವರನ್ನು ನೇಮಕ ಮಾಡಿದ್ದು, ಇವರ ಅವಧಿಯಲ್ಲಿ ಅಕ್ರವಾಗಿದೆ ಎಂದು ಹೇಳಿದರು.

ವಸಂತ ನಗರದ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ನಿಗಮದ ಹಣವನ್ನು ಇಡಲಾಗಿತ್ತು. ಈ ಎಲ್ಲಾ ಹಣವನ್ನು ವ್ಯವಸ್ಥಾಪಕಿ ಶೋಭನಾ ಎಂಬುವವರು ಎಂ.ಜಿ ರಸ್ತೆಯ ಬ್ರ್ಯಾಂಚ್‌ಗೆ ಬೇರೆ ಬೇರೆ ಕಡೆಗಳಿಂದ ಸೇರಿದಂತೆ ಒಟ್ಟು 187 ಕೋ. 33 ಲಕ್ಷ ಎಲ್ಲಾ ಹಣವನ್ನು ವರ್ಗಾಯಿಸಿದ್ದಾರೆ. ಈ ಶಾಖೆಯಿಂದ 89.63 ಕೋಟಿ ರೂ 18 ಅಕೌಂಟ್‌ ಮೂಲಕ ತೆಲಂಗಾಣಕ್ಕೆ ವರ್ಗಾವಣೆಯಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.

ಮೇ.26 ರಂದು ನಿಗದಮ ಅಧೀಕ್ಷಕ ಚಂದ್ರಶೇಖರ್‌ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಡೆತ್‌ ನೋಟ್‌ನಲ್ಲಿ ಪರಶುರಾಮ್‌, ಪದ್ಮನಾಭ್‌, ಸ್ಮಿತಾ ಹೆಸರನ್ನು ಉಲ್ಲೇಖಿಸಿ ಅಕ್ರಮಕ್ಕೆ ಹೊಣೆ ಎಂದು ಬರೆದಿದ್ದಾರೆ. ಈ ಯಾವುದನ್ನು ಆರ್‌. ಅಶೋಕ್‌ ಸದನದಲ್ಲಿ ಪ್ರಸ್ತಾಪವೇ ಮಾಡಲಿಲ್ಲ ಎಂದು ತಿರುಗೇಟು ನೀಡಿದರು.

ಜತೆಗೆ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಲಾಗಿದೆ. ಸಿಬಿಐ ಹಾಗೂ ಇಡಿ ಸ್ವಯಂ ಪ್ರೇರಿತವಾಗಿ ತನಿಖೆ ಮಾಡುತ್ತಿವೆ. ಈಗಾಗಲೇ ದದ್ದಲ್‌ ಹಾಗೂ ಸಚಿವ ನಾಗೇಂದ್ರ ಅವರನ್ನು ಇಡಿ ಬಂಧಿಸಿದ್ದು ವಿಚಾರಣೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.