Mysore
29
clear sky

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಸಿಎಂಗೆ ಮಂತ್ರಿಗಳ ಮನೆ ಮನೆಗೆ ಓಡಾಡುವ ಪರಿಸ್ಥಿತಿ ಬಂದಿದೆ : ಗೋವಿಂದ ಕಾರಜೋಳ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂತ್ರಿಗಳ ಮನೆ ಮನೆಗೆ ಓಡಾಡಿ ಆಂತರಿಕ ಬಿಕ್ಕಟ್ಟನ್ನು ಶಮನ ಮಾಡುವ ಪರಿಸ್ಥಿತಿ ಬಂದಿದೆ. ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲೇ ಜನರ ವಿಶ್ವಾಸವನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಸ್ಯೆ ಬಗೆಹರಿಸಲು ನಿನ್ನೆ ಪರಮೇಶ್ವರ್ ಮನೆಗೆ ಸಿಎಂ ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಮಂತ್ರಿಗಳ ಭಿನ್ನಮತ ತಿಳಿಗೊಳಿಸಲು ಪ್ರಯತ್ನ ಮಾಡಿದ್ದಾರೆ. ಇದರಿಂದ ಪರಮೇಶ್ವರ್ ಅವರನ್ನು ಡಿಸಿಎಂ ಮಾಡುವ ಸಂಶಯ ಬರುತ್ತಿದೆ. ರಾಜ್ಯದಲ್ಲಿ ಇದುವರೆಗೂ ನಮ್ಮ ಸಮುದಾಯದವರು ಸಿಎಂ ಆಗಿಲ್ಲ. ಪರಮೇಶ್ವರ್ ಅವರಿಗೆ ಆ ರೀತಿಯ ಭರವಸೆ ಸಿದ್ದರಾಮಯ್ಯ ಕೊಟ್ಟಿದ್ದರೆ ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ.

ಕಾಂಗ್ರೆಸ್‍ನಲ್ಲಿ ಈಗ ಮೂರು ಗುಂಪುಗಳಾಗಿವೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಶಾಮನೂರು ಶಿವಶಂಕರಪ್ಪರ ಗುಂಪುಗಳಾಗಿವೆ. ಈ ರೀತಿ ರಾಜ್ಯದಲ್ಲಿ ಅಧಿಕಾರಕ್ಕಾಗಿ ಕಚ್ಚಾಟ ನಡೆಯುತ್ತಿದೆ. ರಾಜ್ಯ ಇವತ್ತು ಸಂಕಷ್ಟದ ಪರಿಸ್ಥಿತಿಗೆ ಬಂದು ಸಿಲುಕಿದೆ. ಸಿದ್ದರಾಮಯ್ಯನವರು ಸಿಎಂ ಆಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರ ವಿರುದ್ಧ ಶಾಸಕರು ಅಸಮಾಧಾನಗೊಂಡಿದ್ದಾರೆ. ಇನ್ನೊಂದು ಕಡೆ ಹಳ್ಳಿ ಹಳ್ಳಿಗಳಲ್ಲಿ ಶಾಸಕರಿಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಶಾಸಕರು ಬಂಡಾಯ ಎದ್ದಿದ್ದಾರೆ. ಇದರಿಂದ ಸರ್ಕಾರದ ಅಭದ್ರತೆ ಕಾಡುತ್ತಿದೆ. ಈ ವಿಚಾರದ ಮೇಲಿನ ಗಮನವನ್ನು ಬೇರೆಡೆಗೆ ತಿರುಗಿಸಲು ಹುಲಿ ಉಗುರಿನ ದೊಂಬರಾಟವನ್ನು ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.

ಆಪರೇಷನ್ ಕಮಲದ ವಿಚಾರವಾಗಿ ಶಾಸಕ ರವಿ ಗಣಿಗ ಆರೋಪದ ಬಗ್ಗೆ, ಕಾಂಗ್ರೆಸ್ ಶಾಸಕರು ತಮ್ಮ ರೇಟ್ ಫಿಕ್ಸ್ ಮಾಡಿಕೊಂಡಿದ್ದಾರೆ. ಈ ಶಾಸಕರು ತಮ್ಮನ್ನು ತಾವೇ ಹರಾಜಿಗೆ ಇಟ್ಟುಕೊಂಡಿದ್ದಾರಾ? ಇಷ್ಟು ಲಜ್ಜೆಗೆಟ್ಟು ಯಾರು ನಡೆದುಕೊಳ್ಳಬಾರದು. ಯಾರು ಕೂಡ ಶಾಸಕರಿಗೆ ಆ ರೀತಿ ಮಾಡಿಲ್ಲ. ಅವರು ಅಧಿಕಾರದಲ್ಲಿದ್ದಾರೆ. ಅವರೇ ಅದರ ಬಗ್ಗೆ ತನಿಖೆ ಮಾಡಲಿ ಎಂದು ಹೇಳಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!