ಶಿವಮೊಗ್ಗ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಹಾ ಶಿವರಾತ್ರಿಯಂದು ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ. ಏಕೆಂದರೆ ಯಾವ ಪಕ್ಷದಿಂದ ಹಿಂದೂಗಳ ಅವಹೇಳನ ಆಗುತ್ತಿತ್ತೋ, ಆ ಪಕ್ಷದ ನಾಯಕರೇ ಭಾಗವಹಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು(ಮಾರ್ಚ್.1) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಇಶಾ ಫೌಂಡೇಶನ್ ವತಿಯಿಂದ ಮಹಾ ಶಿವರಾತ್ರಿ ದಿನದಂದು ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಸದ್ಗುರು ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭಾಗಿಯಾಗಿದ್ದು ಸಂತಸ ತಂದಿದೆ. ಅಲ್ಲದೇ ಜನರಿಗೆ ಸತ್ಯ ತಿಳಿದಿದ್ದು, ಯಾವ ಜನರೂ ಕೂಡ ಖಾಲಿ ಮಾತಿಗೆ ಬೆಲೆ ನೀಡಲ್ಲ. ಅದಕ್ಕೆ ಮಹಾಕುಂಭಮೇಳವೇ ಸಾಕ್ಷಿ ಆಗಿದೆ, ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಂಡರೆ ಸಾಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿಯಲ್ಲಿನ ಬಣಬಡಿದಾಟದ ಬಗ್ಗೆ ಮಾತನಾಡಿದ ಅವರು, ಪಕ್ಷದಲ್ಲಿನ ಸಂಘಟನೆಯ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಹೀಗಾಗಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಆದರೆ ಆದಷ್ಟು ಬೇಗ ಈ ಚರ್ಚೆಯ ವಿಚಾರ ಕೊನೆಗೊಳ್ಳುತ್ತದೆ. ಮುಂದಿನ 15 ದಿನದಲ್ಲಿ ಜಿಲ್ಲಾಧ್ಯಕ್ಷರ ಪಟ್ಟಿ ಅಂತಿಮ ವಾಗುತ್ತದೆ ಎಂದರು.




