ಬೆಂಗಳೂರು: ಕನ್ನಡ ಪರ ಸಂಘಟನೆಗಳು ನಾಳೆ ಎಂಇಎಸ್ ನಿಷೇಧಕ್ಕೆ ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಬಂದ್ ನಡೆಸುವ ವೇಳೆ ಬಲವಂತವಾಗಿ ಯಾವುದನ್ನು ಬಂದ್ ಮಾಡಿಸುವಂತಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು(ಮಾರ್ಚ್.21) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೋಲಿಸ್ ಇಲಾಖೆ ವತಿಯಿಂದ ಈಗಾಗಲೇ ಶನಿವಾರದ ಕರ್ನಾಟಕ ಬಂದ್ಗೆ ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಅಲ್ಲದೇ ಕೆಲ ಕನ್ನಡಪರ ಸಂಘಟನೆಗಳು ಬಂದ್ ಬಗ್ಗೆ ಘೋಷಣೆ ಮಾಡಿವೆ. ಹೀಗಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಭದ್ರತೆ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಯಾವುದೇ ರೀತಿ ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ. ಆದರೆ ಕೋರ್ಟ್ ಆದೇಶದಂತೆ ಬಂದ್ ನಡೆಯುವ ವೇಳೆ ಅಗತ್ಯ ಭದ್ರತೆ ನೀಡಲಾಗುವುದು ಎಂದರು.





